ಭಾನುವಾರ, ಅಕ್ಟೋಬರ್ 11, 2020

ಸಿರಿಗೌರಿಯ ಸದಾಶಿವ- ೭

 

ಅಪರ್ಣಾಳ ಕೈ ಹಿಡಿದು ಕುಳಿತಿದ್ದರು ಮೈನಾವತಿಯವರು. "ಹೌದು ಕಂದಾ, ಕೆಲವೊಮ್ಮೆ ಎಲ್ಲವನ್ನೂ ಮರೆಯಲು ಸಾಧ್ಯವಾಗದು. ಮರೆವೆಂಬುದು ಕೆಲವೊಮ್ಮೆ ವರವೂ ಹೌದು, ಶಾಪವೂ ಹೌದು. ಕೆಲವೊಮ್ಮೆ ಮರೆಯಲು ಸಾಧ್ಯವಾಗದೇ ಇರುವಾಗ ಸಂಪೂರ್ಣ ನಿರ್ಲಕ್ಷಿಸಿ ಬಿಡಬೇಕು. ನಿನ್ನ ಮನಸ್ಸಿನ ತಾಕಲಾಟಗಳನ್ನು ನಾನು ಸಂಪೂರ್ಣ ಅರ್ಥಮಾಡಿಕೊಳ್ಳದಿರಬಹುದು. ಆದರೆ, ಕೊಂಚವಾದರೂ ನಾನು ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಹೆತ್ತು, ಹೊತ್ತು ಸಾಕದಿದ್ದರೂ ಕೈ ತುತ್ತು ನೀಡಿರುವೆ. ಹೆತ್ತಾಗ ಮಾತ್ರವೇ ತಾಯಿ ಎನ್ನಿಸಿದಿದ್ದರೆ ಯಶೋದೆ ಕೃಷ್ಣನಿಗೆ ತಾಯಿಯಾಗುತ್ತಲೇ ಇರಲಿಲ್ಲ. ಕಂದಾ, ಎಷ್ಟೋ ಸಾರಿ ನೀನು ಕಾತ್ಯಾಯಿನಿಯ ಜೊತೆಯಲ್ಲಿ ಮನೆಗೆ ಬಂದು ಹೋದ ಮೇಲೆ ಅವಳಿಗೂ ನನಗೂ ಹುಸಿಮುನಿಸಿನ ಜಗಳವಾಗಿದಿದ್ದೆ. ನಾನು ಅವಳಿಗಿಂತ , ನಿನ್ನ ಮೇಲೆಯೇ ಹೆಚ್ಚು ಮಮತೆ ತೋರುತ್ತೇನೆ ಎಂಬುದು ಅವಳ ವಾದ. ಒಮ್ಮೆ ಕಣ್ಮುಚ್ಚಿ ದೀರ್ಘವಾದ ಉಸಿರು ತೆಗೆದುಕೋ.. ಎಲ್ಲವೂ ಸರಿಯಾಗುತ್ತದೆ ಎಂಬ ಆಶಾಭಾವ ಇರಲಿ. ಸರಿಯಾಗದಿದ್ದರೂ ಸರಿಪಡಿಸುವೆ ಎಂಬ ಛಾತಿ ಇರಲಿ. ನೀನು ನಿನ್ನ ತಾಳ್ಮೆಯ, ಪರಿಪೂರ್ಣ ಪ್ರೀತಿಯಿಂದ ಅಶುತೋಷ್ ನಂತಹಾ ಹಿಮಬಂಡೆಯನ್ನೇ ಅಲುಗಾಡಿಸಿದವಳು. ಅಂತಹಾದ್ದರಲ್ಲಿ ನೀನೇ ಹೀಗೆ ಧೈರ್ಯಗೆಟ್ಟರೆ ಹೇಗೆ ? ಅಳುವುದಾದಲ್ಲಿ ಅತ್ತು ಬಿಡು, ಅಳುವನ್ನು ತಡೆ ಹಿಡಿಯಬೇಡ. ಆದರೆ, ಮತ್ತದೇ ಕಾರಣಕ್ಕೆ ನೀನು ಮತ್ತೆಂದೂ ಅಳಬಾರದು. ಇನ್ನು ಮುಂದೆ ಯಾವಾಗಲೂ ನಾನು ನಿನ್ನ ಜೊತೆಗೇ ಇರುವೆ" ಎಂದವರ ಮಾತು ಕೇಳಿ ಅವರ ಮಡಿಲಲ್ಲಿ ತಲೆ ಇಟ್ಟು ಎದೆಯ ನೋವನ್ನೆಲ್ಲಾ ಬಸಿಯುವಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು.


ಎಷ್ಟೋ ಹೊತ್ತಿನ ನಂತರ ಸಾವರಿಸಿಕೊಂಡು "ಅಮ್ಮಾ, ನೀವೆಲ್ಲಾ ಸತ್ತು ಹೋದಿರಿ ಎಂಬ ಸುದ್ದಿ ಕೇಳಿದೆ. ಆದರೆ, ನೀವಿನ್ನು ಬದುಕಿದ್ದೀರಿ ಎಂಬುದನ್ನು ನೋಡಿ ಅರೆಕ್ಷಣ ಸಂತಸವಾಯಿತು. ಆದರೆ, ನನಗೆ ಎಲ್ಲವೂ ಅಯೋಮಯವಾಗುತ್ತಿದೆ. ಅಮ್ಮ, ಬದುಕಿನಲ್ಲಿ ನನ್ನನ್ನು ಹಿಂದಿನ ಎಲ್ಲಾ ಸಮಸ್ಯೆಗಳಿಂದ ಹೊರತಂದು ಎಷ್ಟರಮಟ್ಟಿಗೆ ರೂಪಿಸಿದ್ದೀರಿ ಎಂದರೆ ನನ್ನ ಪ್ರತಿ ಏಳ್ಗೆಯ, ನನ್ನ ಪ್ರತಿ ಯಶಸ್ಸಿನ ಹಿಂದೆ, ಧೈರ್ಯದ ಹಿಂದೆ ನೀವಿದ್ದಿರಿ. ನಾನು ನನ್ನ ಶಾಲಾದಿನಗಳ ನಂತರ ಮತ್ತೆ ನಿಮ್ಮನ್ನು ನೋಡಿದ್ದು ಕಾತ್ಯಾಯಿನಿಯ ಜೊತೆ ಮನೆಗೆ ಬಂದಾಗ. ಅಷ್ಟೊತ್ತಿಗಾಗಲೇ ನಾನು ನಿಮ್ಮ ಮಾರ್ಗದರ್ಶನದಲ್ಲಿ ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಂಡಿದ್ದೆ. ಆಗ ನಿಮ್ಮ ಕಣ್ಣಲ್ಲಿ ಕಂಡ ಹೊಳಪನ್ನು ಮತ್ತೆ ನಾನು ಅಳಿಸಿಬಿಟ್ಟೆನೇ ಅಮ್ಮಾ..? ಅತ್ಯುತ್ತಮ ಶಿಕ್ಷಕರು ಮಾತ್ರವೇ ವಿದ್ಯಾರ್ಥಿಗಳನ್ನು ಮಕ್ಕಳಂತೆ ಭಾವಿಸುತ್ತಾರೆ. ನೀವು ನನ್ನನ್ನು ಮಗಳಿಗಿಂತಲೂ ಮಿಗಿಲಾಗಿ ನೋಡಿಕೊಂಡಿದ್ದೀರಿ. ನೀವು ನನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿಬಿಟ್ಟೆನೇ ಅಮ್ಮಾ..? ಆದರೆ, ನೀವೆಲ್ಲರೂ ಸತ್ತಿರಿ ಎಂಬ ಸುದ್ದಿ ಕೇಳಿ ನಾನು ದುಃಖ ಪಟ್ಟದ್ದೆಷ್ಟು ಗೊತ್ತೇ..? ಹಾಗಾದರೆ, ಕಾತ್ಯಾಯಿನಿ ಕೂಡಾ ಬದುಕಿರುವಳೇ..? ಅಣ್ಣ, ಅತ್ತಿಗೆ, ಅಪ್ಪ ಎಲ್ಲರೂ ಬದುಕಿರುವರೇ ಹೇಳಿ ಅಮ್ಮ ಇಷ್ಟೆಲ್ಲಾ ಸತ್ಯವನ್ನು ನನ್ನಿಂದ ಮುಚ್ಚಿಟ್ಟದ್ದು ಏಕೆ ? ಇದೆಲ್ಲವನ್ನೂ ತಿಳಿದರೆ ಅಶು ತುಂಬಾ ಖುಷಿ ಪಡುತ್ತಾನೆ. ಅವನು ಕಣ್ಣು ಬಿಟ್ಟ ತಕ್ಷಣ ಕಾತ್ಯಾಯಿನಿಯನ್ನು ಅವನ ಮುಂದೆ ತಂದು ನಿಲ್ಲಿಸಿ, ನಾನು ಅವನಿಂದ ದೂರ ಹೊರಟುಬಿಡುತ್ತೇನೆ, ಈಗ ಹೊರಟಂತೆ. ಅಶು ಖುಷಿಯಾಗಿದ್ದರೆ ನನಗೆ ಅಷ್ಟೇ ಸಾಕು ಅಮ್ಮ" 


ಮಾತನಾಡುತ್ತಲೇ ಇದ್ದವಳ ಮಾತನ್ನು ನಿಲ್ಲಿಸಿ " ಏನೆಂದೆ ನೀನು.. ? ಅಶುವನ್ನು ಬಿಟ್ಟು ಹೊರಟಿದ್ದೆಯಾ..? ಎಲ್ಲಿಗೆ..? ಯಾಕೆ..? ನಿಮ್ಮ ನಡುವೆ ಏನಾದರೂ ಜಗಳವಾಯಿತೇ..? ಯಾಕೆ ಹೀಗೆ ನೀನು ತಾಳ್ಮೆ ತಪ್ಪಿದೆ..? ನಿನಗೆ ಅರಿವಿದೆಯೇ ನೀನು ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೆ ಎಂಬುದಾಗಿ..? " ಮೈನಾವತಿಯವರ ಮಾತು ಕಟುವಾಯಿತು. 

"ಅದು ಅಮ್ಮ, ಆದೆಲ್ಲಾ ಒಂದು ದೊಡ್ಡ ಕತೆ, ಸಮಯ ಸಿಕ್ಕಾಗ ಅದನ್ನೆಲ್ಲಾ ಹೇಳುವೆ ಅಮ್ಮಾ. ನನ್ನ ತಪ್ಪಿನ ಅರಿವು ನನಗಾಗಿದೆ ಅಮ್ಮಾ.. ಬೇಕೆಂದು ತಾಳ್ಮೆ ತಪ್ಪಿ ಮಾಡಿದುದಲ್ಲ ಅಮ್ಮ. ನಿಮ್ಮ ಮಾರ್ಗದರ್ಶನದಿಂದ ರೂಪುಗೊಂಡವಳು ನಾನು. ನಾನು ನನ್ನ ಅಶುವನ್ನು ದುಃಖಕ್ಕೆ ದೂಡಲಾರೆ. ಅವನಿಗೇನಾದರೂ ಆದರೆ ನಾನು ಬದುಕಿರುವೆ ಎಂದುಕೊಂಡಿರುವಿರಾ ನೀವು ? ಅದೆಲ್ಲವನ್ನು ಬಿಡಿ. ಕಾತ್ಯಾಯಿನಿಯ ಬಗ್ಗೆ ಹೇಳಿ ಅಮ್ಮ. ಎಲ್ಲಿದ್ದಾಳೆ ಅವಳು ..?" ಎಂದಳು ಅಪರ್ಣಾ. "ಕಾತ್ಯಾಯಿನಿ ಈಗ ಬರಿಯ ನೆನಪು ಮಾತ್ರ ಅಪ್ಪು, ಅವಳಿದ್ದಳು ಎಂಬ ನೆನಪಷ್ಟೇ ಈಗ ಜೀವಂತ. ನಾನು, ವಿರಾಜ್ ಇಬ್ಬರೇ ಈಗ ಬದುಕಿರುವವರು. ಹೆಚ್ಚಿನದ್ದೇನನ್ನೂ ಈಗ ಕೇಳಬೇಡ, ಸತ್ಯವನ್ನು ಅರಗಿಸಿಕೊಳ್ಳಲು ಧೈರ್ಯ ಬೇಕು. ಕೆಲವೊಂದು ವಿಚಾರಗಳು ಯಾವಾಗ ಅರಿವಾಗಬೇಕೋ ಆಗಲೇ ತಿಳಿಯಬೇಕು. ಕೆಲವೊಂದನ್ನು ಮೊದಲೇ ಅರಿಯಲು ಹೊರಟರೆ ಅನರ್ಥವಾಗುತ್ತದೆ ಕಂದಾ. ನಿನಗೊಂದು ಪುಟ್ಟ ಕತೆ ಹೇಳುತ್ತೇನೆ ಕೇಳು.

ನಿನ್ನಂತಹಾ ಒಬ್ಬಳು ಪುಟ್ಟ ಹುಡುಗಿ ಕುತೂಹಲದಿಂದ ರೇಷ್ಮೆ ಹುಳು ತನ್ನ ಗೂಡಿನಿಂದ ಹೊರಬರವುದನ್ನು ತನ್ನ ಬಟ್ಟಲು ಕಂಗಳಿಂದ ಆಶ್ಚರ್ಯವಾಗಿ, ಕೂಲಂಕುಷವಾಗಿ ಗಮನಿಸುತ್ತಿದ್ದಳು. ದಿನಗಳು ಕಳೆಯುತ್ತಿದ್ದಂತೆ ಅದು ಕೊಂಚ ಕೊಂಚವಾಗಿ ಕಷ್ಟಪಟ್ಟು ಗೂಡನ್ನು ಹೊಡೆದು ಹೊರಬರುವುದನ್ನು ಗಮನಿಸುತ್ತಿದ್ದವಳಿಗೆ ಒಂದು ಆಲೋಚನೆ ಬಂದಿತು. ಅದು ಅಷ್ಟು ಕಷ್ಟ ಪಟ್ಟು ಯಾಕೆ ಗೂಡಿನಿಂದ ಹೊರ ಬರಬೇಕು, ಗೂಡಿನಿಂದ ನಾನೇ ಆಚೆ ತೆಗೆದರೆ ಎಂಬ ಆಲೋಚನೆ ಕೂಡಾ ಬಂದಿತು. ಆಗ ಅವಳು ಒಂದು ಚೂಪಾದ ಬ್ಲೇಡ್ ತೆಗೆದುಕೊಂಡು ಗೂಡಿನಿಂದ ಹೊರ ಬರುವ ದಾರಿ ಮಾಡಿದಳು. ಅದು ಗೂಡಿನಿಂದ ಹೊರಬಂದ ಕೆಲವೇ ಕ್ಷಣದಲ್ಲಿ ಸತ್ತು ಹೋಯಿತು. ಅವಳಿಗೆ ಆಶ್ಚರ್ಯ, ಏಕೆ ಹೀಗೆ ಎಂದು. ಆಗ ಅದನ್ನೆಲ್ಲಾ ಗಮನಿಸುತ್ತಿದ್ದ ಅವಳ ಅಮ್ಮ ಹೇಳಿದರು. "ಕಂದಾ, ಕೆಲವು ಕೆಲಸಗಳನ್ನು ನಾವು ಬಲವಂತವಾಗಿ ಮಾಡಿದಾಗ ಅದರ ಫಲ ದೊರೆಯದೇ ಹೋಗುತ್ತದೆ. ಮೊದಲ ಗೂಡಿನಿಂದ ಬಂದ ಹುಳು ತನ್ನ ಸ್ವಯಂ ಶಕ್ತಿಯಿಂದ ಗೂಡಿನಿಂದ ಹೊರಬಂದಿತು, ನೋವಾದರೂ ಅದು ಹೊರಗಿನ ಪ್ರಪಂಚಕ್ಕೆ ಒಡ್ಡಿಕೊಂಡು ಬದುಕುವ ವಾತಾವರಣಕ್ಕೆ ಸ್ವಲ್ಪ ಸ್ವಲ್ಪವೇ ಒಗ್ಗಿಸಿಕೊಂಡಿತು. ಆದರೆ, ನೀನು ಹೊರತೆಗೆದ ಹುಳು ಹೊರಗಿನ ವಾತಾವರಣಕ್ಕೆ ಒಮ್ಮೆಲೆ ಒಗ್ಗಿಸಿಕೊಳ್ಳಲು ಬಹಳ ಕಷ್ಟಪಟ್ಟಿತು. ಹಾಗಾಗಿಯೇ ಹಠಾತ್ ಪರಿಣಾಮಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೇ ಸತ್ತು ಹೋಯಿತು." 


"ಅಪರ್ಣಾ, ತಾನಾಗಿಯೇ ಕೆಲ ರಹಸ್ಯಗಳು ಬಿಚ್ಚಿಕೊಳ್ಳುವ ಮೊದಲೇ ನಾವು ಅದನ್ನು ಬಲವಂತವಾಗಿ ಬಿಚ್ಚಿಸಿಕೊಳ್ಳಲು ಹೋಗಬಾರದು ಕಂದಾ. ಇಷ್ಟು ದಿನಗಳೇ ಕಾದಿದ್ದೀಯ, ಇನ್ನು ಕೆಲವೇ ದಿನಗಳಷ್ಟೇ ಎಲ್ಲವೂ ಸರಿಯಾಗುತ್ತದೆ. ಅಶು ಕೂಡಾ ಹುಷಾರಾಗುತ್ತಾನೆ. ನೀನೀಗ ಧೈರ್ಯದಿಂದ ಎಲ್ಲವನ್ನೂ ಎದುರಿಸು. ನಿನ್ನೊಂದಿಗೆ ಇನ್ನು ನಾನು ಎಂದಿಗೂ ಇರುತ್ತೇನೆ. ಕಾತ್ಯಾಯಿನಿಯನ್ನು ನಿನ್ನಲ್ಲೇ ಕಾಣುತ್ತೇನೆ." ಎಂಬ ಮೈನಾವತಿಯ ಮಾತು ಕೇಳಿ ನಿರಾಳಲಾದಳು.

ಅಷ್ಟರಲ್ಲಿ "ಅಪರ್ಣಾ" ಎಂಬ ಮಾತು ಕೇಳಿ ಅತ್ತ ತಿರುಗಿದವಳ ಬಾಯಲ್ಲಿ ಸಣ್ಣ ಉದ್ಗಾರ ಹೊರಟಿತು "ಅಪ್ಪಾ" ಎಂದು. ಮರುಕ್ಷಣವೇ ಕಟುವಾಗಿ "ಯಾರು ನೀವು..?ಇಲ್ಲಿಗೆ ಏಕೆ ಬಂದಿದ್ದೀರಿ..? ಸತ್ತಿದ್ದೇನೋ ಬದುಕಿದ್ದೇನೋ ಎಂದು ನೋಡಲು ಬಂದಿದ್ದೀರಾ..?" ಎಂಬ ಮಾತನ್ನು ಕೇಳಿ ಅವರು ಅಲ್ಲೇ ನಿಂತರು.

ಅಪರ್ಣಾಳ ಗತವೇನು..? ಅವಳ ತಂದೆಯ ಜೊತೆಗೆ ಅವಳು ಕಟುವಾಗಿ ವರ್ತಿಸಲು ಕಾರಣವೇನು ? ಊಹಿಸಬಲ್ಲಿರಾ?

(ಸಶೇಷ)

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ. ಓದಿದವರು ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಶನಿವಾರ, ಅಕ್ಟೋಬರ್ 3, 2020

ಸಿರಿಗೌರಿಯ ಸದಾಶಿವ - ೬

 

ಅಪಘಾತ, ಆಘಾತಗಳು ನಮ್ಮ ಮನಸ್ಸಿಗೆ, ನಮಗೆ ಹತ್ತಿರದವರಿಗೆ ಆದಾಗ ಮಾತ್ರ ಅಲ್ಲವೇ ಅದರ ಬಿಸಿ ತಟ್ಟುವುದು, ಕೋಟಿ ಇದ್ದರೂ ಜೀವ ಉಳಿಸಲು ವೈದ್ಯರು, ಸಮಯ, ಪುಣ್ಯಫಲ ಎಲ್ಲದರ ಬಲವೂ ಇರಬೇಕು. ನಿರ್ಲಕ್ಷ್ಯವೋ, ಪೂರ್ವ ನಿಯೋಜಿತವೋ ಅಂತೂ ಅಪಘಾತ ಆಗಿ ಹೋಗಿತ್ತು. ವಿಧಿಲಿಖಿತ ಹಾಗೆಯೇ ಇದ್ದರೆ ಬದಲಾಯಿಸಲು ಯಾರಿಗೆ ಸಾಧ್ಯ. 


ಇತ್ತ ಅಪರ್ಣಾಳಿಗೆ ಚಡಪಡಿಕೆ ಶುರುವಾಗಿತ್ತು. ಮನಸ್ಸಿನಲ್ಲಿ ಏನೋ ತಳಮಳ. ಹತ್ತಿರದವರಿಗೆ ಯಾರಿಗಾದರೂ ಏನಾದರೂ ಅಪಾಯವಾಗುವ ಸಂಭವವಿದ್ದರೆ ಮನಸ್ಸಿನಲ್ಲಿ ಉಂಟಾಗುವ ತಳಮಳ ಅದು. ನಂದನ್ ಅದೇ ಸಮಯಕ್ಕೆ ತಂದ ಸುದ್ದಿ ಅವಳ ಜಂಘಾಬಲವನ್ನೇ ಉಡುಗಿಸಿಬಿಟ್ಟಿತು. ಅಶುತೋಷ್ ಅನ್ನು ನೋಡಲು ಬರುವಷ್ಟರಲ್ಲಿ ಅವನನ್ನು ಐ.ಸಿ.ಯು ಒಳಗೆ ಸೇರಿಸಿ ಆಗಿತ್ತು. ಅಲ್ಲೇ ಕುಸಿದು ಕುಳಿತಳು.

"ಅಶು, ನಾನು ನಿನ್ನಿಂದ ದೂರ ಇರಲು ಬಯಸಿದ್ದೇ ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಗಿ ಹೋಯಿತೇ..? ಇಷ್ಟು ದಿನದ ನನ್ನ ಸಹನೆಯ ಕಟ್ಟೆ ಒಡೆದು ಹೋದದ್ದೇಕೆ? ನೀನಿರದೆ ನಾನು ಬದುಕುವುದು ಸಾಧ್ಯವೇ..? ನಮ್ಮನ್ನು ನಾವು ಎಷ್ಟೇ ಅರಿತುಕೊಂಡು ಒಂದಾಗಿದ್ದೇವೆ ಎಂದುಕೊಂಡರೂ ಸಹಾ ನಮ್ಮ ನಡುವೆ ಅಂತರದ ಒಂದು ಎಳೆ ಉಳಿದೇ ಹೋಯಿತಲ್ಲ. 

ಪ್ರೀತಿ ಎಂದರೆ ಒಬ್ಬರಿಲ್ಲದಿದ್ದರೂ ಮತ್ತೊಬ್ಬರು ಬದುಕುವುದು ಎಂದು ನಿನಗೆ ಧೈರ್ಯ ತುಂಬುವಾಗ ನಾನು ಹೇಳಿದ್ದೆ, ಆದರೆ ನೀನಿಲ್ಲದೆ ನಾನು ಬದುಕಲು ಸಾಧ್ಯವೇ..? ನಿನ್ನ ಮೇಲಿನ ತಾತ್ಕಾಲಿಕ ಕೋಪ ಕೂಡಾ ಕೆಲ ದಿನಗಳ ಕಾಲ ನನ್ನನ್ನು ದೂರ ಇರಿಸುವುದು ಸಾಧ್ಯವಿರಲಿಲ್ಲ. ಆ ಯೋಚನೆಯಲ್ಲಿ ನಾನೆಷ್ಟು ಬೆಂದಿದ್ದೇನೆ ಗೊತ್ತೇ..? ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನಿಂದ ದೂರ ಹೋಗುವ ನಿರ್ಧಾರದ ಹಿಂದೆ ನಿನ್ನ ಒಳಿತೇ ಇದ್ದಿತು, ಹೊರ ನೋಟಕ್ಕೆ ನಗು ಮುಖದ ಮುಖವಾಡ ಹಾಕಿರುವ ನಿನ್ನ ಮನಸ್ಸಿನ ಹಿಂದಿನ ದುಃಖ ಅರಿಯದಷ್ಟು ಮೂಢಳು ನಾನಲ್ಲ. ನಿನ್ನೆದೆಯ ಮಿಡಿತದ ಪ್ರತಿ ಸದ್ದನ್ನೂ ಅರಿಯಬಲ್ಲೆ ನಾನು.  ನಿನ್ನ ದುಃಖದ ಮೂಲ ಹುಡುಕಿ ಹುಡುಕಿ ಸೋತು ಹೋದೆ. ಮಾತಿಗೂ ಜಗ್ಗಲಿಲ್ಲ, ಕೋಪಕ್ಕೆ ಬಗ್ಗಲಿಲ್ಲ, ಮೌನಕ್ಕೆ ಮಣಿಯಲಿಲ್ಲ. ಮತ್ತಾವ ದಾರಿಯೂ ಕಾಣದಿದ್ದಾಗ ಅತ್ತೆಯೇ ನನಗೆ ಇದನ್ನು ಸೂಚಿಸಿದ್ದು. 


ಅವರ ಮಾತನ್ನು ಕೇಳಿ ಒಂದರೆಕ್ಷಣ ನನ್ನ ಗುಂಡಿಗೆಯೇ ನಿಂತಂತಾಗಿತ್ತು. ಪ್ರತಿಯೊಂದಕ್ಕೂ ನೀನು ನನ್ನನ್ನೇ ಅವಲಂಬಿಸಿದ್ದೆ ಎನ್ನುವುದರ ಅರಿವು ನನಗಿತ್ತು. ನೀನು ನನ್ನನ್ನು ಹೋಗಲು ಬಿಡಲಾರೆ ಎಂಬ ಹುಂಬ ಧೈರ್ಯವಿತ್ತು. ಅದಕ್ಕೆ ನಾನು ಅತ್ತೆ, ಮಾವ ಇಲ್ಲದ ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಈಗ ಅವರು ಬಂದಾಗ ನಾನು ಯಾವ ಉತ್ತರ ಕೊಡಲಿ? ನಿಮ್ಮ ಮಗನ ಈ ಸ್ಥಿತಿಗೆ ನಾನೇ ಕಾರಣ ಎಂಬ ಮಾತನ್ನು ಹೇಗೆ ಹೇಳಲಿ ?" ಹೀಗೇ ಅವಳ ಮಾತಿನ ಪ್ರವಾಹ ಸಾಗುತ್ತಿತ್ತು. ಅದಕ್ಕೆ ತಡೆಯೊಡ್ಡಿದ್ದು ಅಥರ್ವನ ಮಾತು . "ಅಮ್ಮಾ, ಅಳಬೇಡ ಅಮ್ಮ. ನಾನು ಯಾವತ್ತೂ ನಿನ್ನನ್ನು ಐಸ್ಕ್ರೀಮ್ ಬೇಕು ಎಂದು ಕೇಳುವುದಿಲ್ಲ, ಹಠ ಮಾಡುವುದಿಲ್ಲ. ಗುಡ್ ಬಾಯ್ ಆಗಿರುತ್ತೇನೆ. ನೀನು ಅತ್ತರೆ ನನಗೂ ಅಳು ಬರುತ್ತೆ, ಅಳಬೇಡ ಅಮ್ಮ" ಎಂಬ ಪುಟ್ಟ ಮಾತಿಗೆ ಮತ್ತೆ ಅವಳ ಅಳು ಹೆಚ್ಚಾಯಿತು.

ನಂತರ ತನ್ನನ್ನು ತಾನೇ ನಿಯಂತ್ರಿಸಿಕೊಂಡು "ಇಲ್ಲ ಕಂದಾ, ನಾನು ಅಳುವುದಿಲ್ಲ. ಹಸಿವಾಗುತ್ತಿದೆಯಾ..?" ಎಂದು ಕೇಳಿದಳು. "ಹೂಂ ಅಮ್ಮ. ಆದರೆ, ಅಣ್ಣ ಮತ್ತೆ ಅಕ್ಕ ಇಬ್ಬರೂ ಎದ್ದ ಮೇಲೆ ಊಟ ಮಾಡುತ್ತೇನೆ. ಪಾಪ, ಅವರಿಗೂ ಹೊಟ್ಟೆ ಹಸಿದಿರುತ್ತೆ. ಅಲ್ವಾ ಅಮ್ಮಾ ? ಪಾಪ, ಅವರ ಅಮ್ಮ ಇಲ್ಲಿಲ್ಲ. ನಾವೇ ಅವರಿಗೂ ಊಟ ತಗೊಂಡು ಹೋಗೋಣ ಅಲ್ವಾ, ಅಮ್ಮಾ?" ಎಂದು ಹೇಳಿದ. ಮುಗ್ಧ ಮಾತುಗಳಿಗೆ ಏನು ಹೇಳಲೂ ಸಹಾ ತೋಚಲಿಲ್ಲ ಅವಳಿಗೆ. ಕೆಲವೊಮ್ಮೆ ದೊಡ್ಡವರಿಗೆ ಹೊಳೆಯದ ಆಲೋಚನೆಗಳು ಮಕ್ಕಳಿಗೆ ಹೊಳೆಯುವುದು ಸಹಾ ಉಂಟು. ಈಗ ಅಪರ್ಣಾಳಿಗೆ ಕರ್ತವ್ಯದ ನೆನಪಾಯಿತು. ಅಲ್ಲಿಗೆ ಹೋಗುವುದೋ ಅಥವಾ ಇಲ್ಲೇ ಅಶುತೋಷ್ ನನ್ನು ಕಾಯುವುದೋ ಗೊಂದಲದ ನಡುವಲ್ಲಿ ಮಕ್ಕಳ ಕುರಿತು ಆಲೋಚಿಸಿದಳು.

ಆಶುತೋಷ್ ಆಪರೇಷನ್ ಮುಗಿಯಲು ಇನ್ನೂ ಸಮಯ ಬೇಕು. ಅಷ್ಟರಲ್ಲಿ ಮಕ್ಕಳನ್ನು ನೋಡಿ, ಡಾಕ್ಟರ್ ಹತ್ತಿರ ವಿಚಾರಿಸಿಕೊಂಡು ಬರುತ್ತೇನೆ ಎನ್ನುತ್ತಾ ನಂದನ್ ಹತ್ತಿರ ಹೇಳಿ ಹೊರಟಳು. ನಂದನ್ "ಬೇಡ, ನೀವು ಇಲ್ಲೇ ಇರಿ. ನಾನೇ ವಿಚಾರಿಸಿಕೊಂಡು ಅಥರ್ವನಿಗೆ ಊಟ ಮಾಡಿಸಿಕೊಂಡು, ನಿಮಗೂ ಊಟದ ವ್ಯವಸ್ಥೆ ಮಾಡುತ್ತೇನೆ" ಎಂದು ಹೇಳಿ ಅವಳ ಪ್ರತಿಕ್ರಿಯೆಗೂ ಕಾಯದೆ ಅಥರ್ವನನ್ನು ಎತ್ತಿಕೊಂಡು ಹೊರಟ. ಅಪರ್ಣಾ ತಡೆದರೆ ಎಂಬ ಆಲೋಚನೆಯಲ್ಲಿ, ಅವಳನ್ನು ಸದ್ಯಕ್ಕೆ ಆ ಕಡೆ ಹೋಗದಂತೆ ಮಾಡಲು ಅವನಿಗೆ ಇದ್ದ ದಾರಿ ಇದೊಂದೇ.. ಸತ್ಯವನ್ನು ಮುಚ್ಚಿಡಲು ಎಷ್ಟು ಕಾಲ ಸಾಧ್ಯ? ಆದರೆ, ಅಶು ಎಚ್ಚರವಾಗುವವರೆಗೆ, ಅವನೇ ಇವೆಲ್ಲವನ್ನೂ ಸರಿ ಪಡಿಸುವವರೆಗೆ ನಂದನ್ ನಿಗೆ ಏನನ್ನು ಮಾಡಲು  ಸಹಾ ಧೈರ್ಯವಿಲ್ಲ. ಎಲ್ಲವೂ ಸರಿ ಹೋಗಲು ಇನ್ನೇನು ಸಾಧ್ಯವಿತ್ತು ಎನ್ನುವಾಗ ಏನೆಲ್ಲಾ ಆಗಿ ಹೋಯಿತು ? ಎಂದು ನಿಟ್ಟುಸಿರಿಟ್ಟು ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಟನು.

ನಂದನ್ ಹೊರಟಂತೆ ಇತ್ತ ಅಪರ್ಣಾಳಿಗೆ ಒಂಟಿತನ ಭಾಸವಾಯಿತು. ಮತ್ತದೇ ಆಲೋಚನೆಗಳು ಮುತ್ತಿಗೆ ಹಾಕಿದವು. ಒಂಟಿತನ ಬರೀ ಬಾಹ್ಯದಲ್ಲಿ ಮಾತ್ರವಲ್ಲ, ಅಂತರಂಗದಲ್ಲಿ.. ಬಾಹ್ಯದ ಒಂಟಿತನ ಛಲ ಹುಟ್ಟಿಸುತ್ತದೆ. ಆದರೆ, ಅಂತರಂಗದ ಒಂಟಿತನ ಆಲೋಚನೆಗಳಿಂದ ಕುಗ್ಗಿಸಿ ಬಿಡುತ್ತದೆ. ಯಾವಾಗಲೂ ಒಂಟಿತನವನ್ನು ಅರಸುತ್ತಿದ್ದವಳು ನಾನು. ಇದೇನಾಗಿ ಹೋಯಿತು.. ? ಇಷ್ಟು ಬದಲಾವಣೆ ಇಷ್ಟು ಕ್ಲುಪ್ತ ಸಮಯದಲ್ಲಿ.. ಬದುಕಿನ ಗತಿ ಇಷ್ಟು ಬೇಗ ಬದಲಾಗುವುದೇ.. ಕಣ್ಮುಚ್ಚಿ ಕುಳಿತವಳಿಗೆ "ಅನಿಷ್ಟ ಇವಳು, ಇವಳಿಂದಾಗಿಯೇ ಎಲ್ಲವೂ ಆದದ್ದು.. ಅನಿಷ್ಟ, ದುರಾದೃಷ್ಟ" ಈ ಮಾತುಗಳು ಕಿವಿಗೆ ಬಿದ್ದಂತಾಗಿ ಎಚ್ಚೆತ್ತಳು. ಎಷ್ಟೋ ಕಷ್ಟ ಪಟ್ಟಿದ್ದಳು ಅವೆಲ್ಲದರಿಂದ ಹೊರಬರಲು, ಆದರೆ, ಅತೀತ ಮತ್ತೆ ಕಾಡಿದಂತಾಗಿ ಬೆಚ್ಚಿದಳು. ಕಣ್ಮುಚ್ಚಿ "ವಸುಂಧರಾ ಎಸ್ಟೇಟ್" ಅನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ, ಮತ್ತದೇ ಧ್ವನಿ, ಮರೆಯಲು ಪ್ರಯತ್ನಿಸಿದಷ್ಟೂ ಧ್ವನಿ ಹೆಚ್ಚಾಗಿ ಅವಳನ್ನು ಚುಚ್ಚಿದಂತಾಗುತ್ತಿತ್ತು. "ನೋ...." ಎಂದು ಜೋರಾಗಿ ಕಿರುಚಿದ ಧ್ವನಿಗೆ ಅಲ್ಲಿದ್ದ ಎಲ್ಲರೂ ಒಮ್ಮೆ ಇವಳತ್ತ ತಿರುಗಿದರು. 

"ಅಪರ್ಣಾ, ಮರೆಯಲು ಪ್ರಯತ್ನ ಮಾಡುವುದಕ್ಕಿಂತ ನಿರ್ಲಕ್ಷಿಸಿಬಿಡು" ಎಂದು ಹೇಳಿ ಅವಳ ಕೈಯನ್ನು ತಮ್ಮ ಹಸ್ತಕ್ಕೆ ತೆಗೆದುಕೊಂಡು ಧೈರ್ಯ ತುಂಬಿದವರತ್ತ ಒಮ್ಮೆ ದಿಗ್ಭ್ರಮೆಯಿಂದ ನೋಡಿದಳು.


ಯಾರವರು ಎಂದು ಊಹಿಸಬಲ್ಲಿರಾ ?
(ಸಶೇಷ)

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹಕ್ಕೆ ಸ್ಫೂರ್ತಿ. ಓದಿದವರು ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 27, 2020

ಸಿರಿಗೌರಿಯ ಸದಾಶಿವ- ೫

 


"ಕಾರುಣ್ಯ"ದಲ್ಲಿ ಚಿಕಿತ್ಸೆಗೆ ಬೇಕಿದ್ದ ಎಲ್ಲವೂ ಸಿದ್ಧವಾಗಿತ್ತು. ನಂದನ್ ನ ಪ್ರಭಾವ ಕೂಡಾ ಅಷ್ಟರಮಟ್ಟಿಗೆ ಇದ್ದಿತು. ಅಲ್ಲಿದ್ದ ವೈದ್ಯರು, ಕೆಲಸಗಾರರು ಸಹಾ ಅಷ್ಟೇ ನಿಷ್ಠೆ ಉಳ್ಳವರು. ಪ್ರತಿಯೊಬ್ಬ ಕೆಲಸಗಾರರನ್ನು ಸಹಾ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಕೂಡಾ ಹಾಗೆಯೇ ಇತ್ತು. ಹಣ, ವಶೀಲಿ ಎರಡೂ ಸಹಾ ಇಲ್ಲಿ ನಡೆಯುತ್ತಿರಲಿಲ್ಲ. ಸೇವಾ ಮನೋಭಾವಕ್ಕಷ್ಟೇ ಅಲ್ಲಿ ಪ್ರಾಮುಖ್ಯತೆ.  ambulance ಬಂದದ್ದೇ ತಡ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅಥರ್ವನಿಗೆ ಸಣ್ಣ-ಪುಟ್ಟ ತರಚು ಗಾಯಗಳಾಗಿದ್ದವು ಅಷ್ಟೇ. ಅಪರ್ಣಾ ಕೂಡಾ ಹುಷಾರಾಗಿದ್ದಳು. ಮೈನಾವತಿಯವರಿಗೆ ಶಾಕ್ ನಿಂದಾಗಿ ಪ್ರಜ್ಞೆ ತಪ್ಪಿತ್ತು. ಸುಕ್ಷಿತಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಸ್ಕಂದನಿಗೂ ಬಲವಾದ ಪೆಟ್ಟು ಬಿದ್ದು ತಲೆಯಿಂದ ರಕ್ತ ಸುರಿಯುತ್ತಿತ್ತು. ಇಬ್ಬರನ್ನೂ ಐ.ಸಿ.ಯು ಗೆ ಕರೆದೊಯ್ಯಲಾಯಿತು.


ಇತ್ತ ಅಶುತೋಷ್ ನಿಗೆ ಬಂದ ಕಾಲ್ ವಿರಾಜ್ ನದ್ದು. ಅಶುತೋಷ್ ಕೋಪವಿದ್ದರೂ ಬಂದ ಕಾಲ್ ಅನ್ನು ನಿರಾಕರಿಸಲಾರ. ಅವನಿಗೆ ಸಿಟ್ಟು ತೀರಿಸಿಕೊಳ್ಳಲು ಮಾರ್ಗವೊಂದು ಬೇಕಿತ್ತು. ಸಿಟ್ಟು ಎಂಬುದು ಹಾಗೆಯೇ.. ಹೊರ ಹಾಕಿದರೆ ಕಡಿಮೆಯಾಗುತ್ತದೆ. ಒಳ ತುಂಬಿಸಿಕೊಂಡಷ್ಟೂ ಮನುಷ್ಯನನ್ನು ಕೆರಳಿಸುತ್ತದೆ. ಬೆಳೆದು ಹೆಮ್ಮರವಾಗಿ ದ್ವೇಷಕ್ಕೆ ಎಡೆ ಮಾಡಿಕೊಡುತ್ತದೆ. ಬಂದ ಕರೆಯನ್ನು ರಿಸೀವ್ ಮಾಡಿದ ನಂತರ ವಿರಾಜ್ ನನ್ನು ಮಾತನಾಡಲು ಸಹಾ ಬಿಡದೆ "ಕಾತ್ಯಾಯಿನಿಯನ್ನು ನನ್ನಿಂದ ಬೇರೆ ಮಾಡಿದ್ದು ಸಾಲಲಿಲ್ಲವೇ..? ಈಗ ಸ್ಕಂದನನ್ನು ಸಹಾ ನನ್ನಿಂದ ದೂರ ಮಾಡುತ್ತಿರುವೆ. ನನ್ನ ಮೇಲೆ ನಿನಗೆ ದ್ವೇಷವಿದ್ದರೆ ನೇರಾನೇರ ಬಂದು ಮಾತನಾಡು, ಇಲ್ಲವೇ ನೇರವಾಗಿಯೇ ಕೊಂದುಬಿಡು. ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆಯಬೇಡ" ಎಂದು ಹೇಳಿದ. ಅದಕ್ಕೆ ವಿರಾಜ್ "ಅಶು, ಸ್ವಲ್ಪ ನನ್ನ ಮಾತು ಕೇಳು, ತಪ್ಪು ಮಾಡಿದ್ದೆ ನಿಜ. ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುವಷ್ಟು ಮೂರ್ಖ ನಾನಲ್ಲ. ಸ್ಕಂದನನ್ನು ನಾನೇಕೆ ಕೊಲ್ಲಲಿ ? ಅವನ ಹೆತ್ತ ತಂದೆ ನೀನೇ ಆದರೂ ಸ್ವಂತ ಮಗನಿಗಿಂತ ಹೆಚ್ಚಾಗಿ ನಾನು ಅವನನ್ನು ಸಾಕಿದ್ದೇನೆ. ನನ್ನ ತಪ್ಪಿನ ಪ್ರಾಯಶ್ಚಿತ್ತ ಎಂದಲ್ಲ. ಕರುಳ ಬಳ್ಳಿಯ ಸಂಬಂಧ ನನ್ನನ್ನು ಹಾಗೆ ಮಾಡುವಂತೆ ಪ್ರೇರೇಪಿಸುತ್ತದೆ. ಸ್ಕಂದ ಮಾತ್ರವಲ್ಲ, ನನ್ನ ಮಗಳು ಸುಕ್ಷಿತ ಕೂಡಾ ಈಗ ಪ್ರಾಣಾಪಾಯದಲ್ಲಿದ್ದಾಳೆ. ಅವರನ್ನು ಉಳಿಸು ಎಂದು ಕೇಳಿಕೊಳ್ಳಲು ನಾನು ನಿನಗೆ ಕರೆ ಮಾಡಿದೆ. ನಾನೇ ನನ್ನ ಮಕ್ಕಳನ್ನು ಉಳಿಸಿಕೊಳ್ಳುವೆ, ನನ್ನ ಪ್ರಾಣ ಹೋದರೂ ಸರಿ.." ಎನ್ನುತ್ತಾ ಕರೆಯನ್ನು ಕೊನೆಗೊಳಿಸಿದನು. 

ಅಶುತೋಷ್ ತಕ್ಷಣವೇ ಆಸ್ಪತ್ರೆಗೆ ಹೊರಟನು. ಮನಸ್ಸಿನ ಆಲೋಚನಾ ಲಹರಿ ವಿವಿಧ ದಿಕ್ಕಿನಲ್ಲಿ ಸಾಗುತ್ತಿತ್ತು. ಕೆಲವೊಮ್ಮೆ ಅತ್ಯಂತ ತಾಳ್ಮೆಯ ಕಾರಣ ಬದುಕಲ್ಲಿ ಹಲವರನ್ನು ಕಳೆದುಕೊಳ್ಳುತ್ತೇವೆ. ಆದರೆ, ಹಲವು ಬಾರಿ ಕೋಪದಿಂದ. ನಾನು ಇಷ್ಟು ದಿನ ವಿರಾಜ್ ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೇ? ಅವನನ್ನು ಮಾತ್ರವಲ್ಲ, ಬದುಕಲ್ಲಿ ನಾನು ಯಾರನ್ನೂ ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ.

ಅಪರ್ಣಾ ಯಾವಾಗಲೂ ಹೇಳುತ್ತಿದ್ದಳು "ಅಶು, ಯಾವಾಗಲೂ ಸತ್ಯ ನಾವು ನೋಡುವುದಕ್ಕಿಂತ ವಿಭಿನ್ನವಾಗಿರುತ್ತದೆ. ಅದನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ನಾವು ಬದುಕನ್ನು ಬದುಕಬೇಕಾಗುತ್ತದೆ. ತಪ್ಪು ಎಂಬುದು ಕೂಡಾ ಮನಸ್ಸಿನ ಆಲೋಚನಾ ಲಹರಿಗೆ ಸಂಬಂಧಿಸಿದಂತೆ. ಕೆಲವೊಮ್ಮೆ 6 ಎಂಬುದು ಎದುರು ದಿಕ್ಕಿನಿಂದ ನೋಡಿದರೆ 9 ಎಂಬಂತೆ ಭಾಸವಾಗುತ್ತದೆ. ಇದು ತಪ್ಪು-ಒಪ್ಪುಗಳ ಸಮರ್ಥನೆಯಲ್ಲ. ಆದರೆ, ಬದುಕಿನ ಸರಿ-ತಪ್ಪುಗಳ ವಿಮರ್ಶೆ. ಕೆಲವೊಂದು ಅಮೃತದ ಹಿಂದೆ ಹಾಲಾಹಲವಿರುತ್ತದೆ. ಅಮೃತ ಬೇಕೆಂದರೆ ಹಾಲಾಹಲವನ್ನು ಸಹಾ ಕುಡಿದು ದಕ್ಕಿಸಿಕೊಳ್ಳುವ ಛಾತಿ ಇರಬೇಕು. ಪಳಗಿಸಲು ಬಂದರೆ ವಿಷ ಸರ್ಪವನ್ನು ಸಹಾ ಪಳಗಿಸಬಹುದು, ಇದೆಲ್ಲದಕ್ಕೂ ಸಾಕ್ಷಿ ಮಹಾದೇವ ಸದಾಶಿವ. ನಿನಗೆ ಕಷ್ಟ ಬಂದಾಗ ಅವನನ್ನು ಸ್ಮರಿಸಿದರೆ ಯಾವುದೋ ಬಲ ಬಂದಂತಾಗುತ್ತದೆ". ಅಶುತೋಷ್ ಅವಳ ಮಾತನ್ನು ನೆನಪಿಸಿಕೊಂಡು ಒಮ್ಮೆ ಮನಸ್ಸಿನಲ್ಲಿ ಶಿವನ ಧ್ಯಾನ ಮಾಡಿದ. ಒಮ್ಮೆಯೂ ದೇವರನ್ನು ನಂಬದವನು ಅಪರ್ಣಾ ಬಂದ ಮೇಲೆ ನಂಬತೊಡಗಿದ್ದು ಅವಳ ಆರಾಧ್ಯ ದೈವ ಸದಾಶಿವನನ್ನು. ಅಷ್ಟಕ್ಕೂ ಇಷ್ಟದೈವ ಅಥವಾ ಇಷ್ಟಪಟ್ಟದ್ದು ಯಾವುದೇ ಆದರೂ ಅದರ ಹಿಂದೆ ನಾವು ಇಷ್ಟಪಟ್ಟವರ ಪ್ರಭಾವ ಇರುತ್ತದೆ. ಅಯ್ಯೋ, ಸ್ಕಂದನ ಆಲೋಚನೆಯಲ್ಲಿ ನಾನು ಅಪರ್ಣಾ, ಮೈನಾ ಅಮ್ಮ ಮತ್ತು ಅಥರ್ವನ ಪರಿಸ್ಥಿತಿಯನ್ನು ಕೇಳುವುದನ್ನೇ ಮರೆತು ಹೋದೆ. ಕರುಳ ಸಂಬಂಧವೆಂದರೆ ಹೀಗೆಯೇ..? ಮನುಷ್ಯನನ್ನು ಬೇರೆಲ್ಲಾ ಆಲೋಚನೆಯಿಂದ ದೂರವಿಡಲು, ಕ್ಷಣ ಕಾಲ ದುರ್ಬಲವನ್ನಾಗಿ ಮಾಡಲು  ಬಹುಶಃ ಮಕ್ಕಳಿಗೆ ಮಾತ್ರ ಸಾಧ್ಯವೇನೋ..? ಅಥರ್ವನ ಜೊತೆಗೆ ಕಳೆದ ಕ್ಷಣಗಳು ಸಹಾ ಸವಿ ಕ್ಷಣಗಳು. ಅಥವಾ ನಾನು ಸ್ಕಂದನನ್ನು ಅವನಲ್ಲಿ ಕಾಣುತ್ತಿದ್ದೇನೆ.. ? ಏನೇ ಇದ್ದರೂ ಮಕ್ಕಳೆಂಬ ಮಮತೆ, ಅವರ ಮುಗ್ಧತೆ ಅವರತ್ತ ನಮ್ಮನ್ನು ಸ್ವಾಭಾವಿಕವಾಗಿ ಸೆಳೆದು ಬಿಡುತ್ತವೆ. ಸ್ಕಂದನನ್ನು ನಾನು ನನ್ನ ಮನೆಗೆ ಕರೆದೊಯ್ಯಬೇಕು. ಆನಂತರ ಸ್ಕಂದ ಮತ್ತು ಅಥರ್ವ ಇಬ್ಬರೂ ಸಹಾ ನನ್ನ ಜೊತೆಯೇ ಉಳಿಯುತ್ತಾರೆ.. ಹೀಗೆಯೇ ಆಲೋಚನಾ ಲಹರಿ ಮುಂದುವರಿಯುತ್ತಿತ್ತು. 

ಮುಂದಿನಿಂದ ಅಡ್ಡಾದಿಡ್ಡಿ ಬಂದ ಲಾರಿಯೊಂದು ಅಶುತೋಷ್ ಕಾರಿಗೆ ಗುದ್ದಿತು. ಭವಿಷ್ಯದ ಬಣ್ಣ ಬಣ್ಣದ ಕನಸುಗಳಲ್ಲಿ ಮುಳುಗಿದ್ದ ಅಶುತೋಷ್ ನ ಬದುಕು ಇನ್ನೇನು ಮುಗಿಯುವುದರಲ್ಲಿತ್ತು. 

ಬದುಕು ಎಂಬುದು ಕೆಲವೊಂದು ಸಂಧರ್ಭಗಳನ್ನು ಮತ್ತೊಬ್ಬರ ಬದುಕಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಗಂಟು ಹಾಕಿರುತ್ತಾನೆ. ಕಾಕತಾಳೀಯವೋ ಅಥವಾ ವಿಧಿ ನಿಯಾಮಕವೋ ವಿರಾಜ್ ಕೂಡಾ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ. ತನ್ನ ಮಗಳು ಸುಕ್ಷಿತ ಮಾತ್ರ ಮನಸ್ಸಿನಲ್ಲಿ ತುಂಬಿದ್ದಳು. ಆದರೆ, ಯಾವುದೋ ಅಪಘಾತ ಎಂದು ನಿರ್ಲಕ್ಷಿಸಿ ಸಾಗಲಿದ್ದವನ ಮನಸ್ಸಿನಲ್ಲಿ ಕಾತ್ಯಾಯಿನಿ ಹೇಳುತ್ತಿದ್ದ ಮಾತು ನೆನಪಾಯಿತು. "ಮತ್ತೊಬ್ಬರು ನಮ್ಮನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂಬುದು ಅವರ ವ್ಯಕ್ತಿತ್ವವನ್ನು ತೋರಿಸಿದರೆ ನಾವು ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ." ಇವತ್ತು ಸುಕ್ಷಿತ ಮತ್ತು ಸ್ಕಂದನಿಗೆ ಅಪಘಾತವಾದಾಗ ಬೇರೆಯವರು ಸಹಾ ಹೀಗೆಯೇ ನಿರ್ಲಕ್ಷಿಸಿ ನಡೆದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯೊಂದು ಮನಸ್ಸಿನಲ್ಲಿ ಎದ್ದಿತು. ವಿರಾಜ್ ನಂತಹಾ ಒಳ್ಳೆಯ ಮನಸ್ಸು ಕುಡಿತದ ಕಾರಣದಿಂದ ಸಮಾಜಕ್ಕೆ ಕಂಡಿರಲಿಲ್ಲ. ವಿರಾಜ್ ನ ಆತ್ಮಸಾಕ್ಷಿ ಯಾಕೋ ಈ ಅಪಘಾತವನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಬಿಡಲಿಲ್ಲ. ಕಾರನ್ನು ಯೂ ಟರ್ನ್ ಮಾಡಿ ಬಂದವನಿಗೆ ಆಘಾತ ಕಾದಿತ್ತು. ತಕ್ಷಣವೇ ambulance ಗೆ ಕರೆ ಮಾಡಿದ ಮತ್ತು ಪೊಲೀಸರಿಗೆ ಸಹಾ. ಯಾಕೋ ಮನಸ್ಸು ಶಂಕಿಸುತ್ತಿತ್ತು, ಆದರೆ ಆಧಾರವಿರಲಿಲ್ಲ..

ಲಾರಿಯಲ್ಲಿ ಬಂದು ಅಪಘಾತ ಮಾಡಿದ ವ್ಯಕ್ತಿ ಯಾರಿಗೋ ಫೋನ್ ನಲ್ಲಿ "ಬಾಸ್, ಇವತ್ತಿಗೆ ಅವನ ಕತೆ ಮುಗಿಯಿತು" ಎಂದು ಹೇಳಿದ.


ಕತೆ ಬರೆಯುವವರಾರೋ, ಮುಂದುವರಿಸುವರಾರೋ.. ಅಂತ್ಯ ಮಾಡಿದೆವು ಎಂದು ಬೀಗುತ್ತಾರೆ. ಆದಿ, ಅಂತ್ಯ ಎಲ್ಲವೂ ನೀನೇ ಅಲ್ಲವೇ ಮಹಾದೇವ. ಎಲ್ಲವೂ ನಿನ್ನಿಚ್ಚೆ ಎಂದು ಶಿವನನ್ನು ಮನದಲ್ಲೇ ಸ್ಮರಿಸಿದರು ಆಗಷ್ಟೇ ಎಚ್ಚರವಾದ ಮೈನಾವತಿಯವರು

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹಕ್ಕೆ ಸ್ಫೂರ್ತಿ. ಓದಿದವರು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 20, 2020

ಬಚ್ಚಿಟ್ಟ ಭಾವಗಳ ಬಿಚ್ಚಿಟ್ಟ ಪುಟಗಳು

 


ಮನಸ್ಸಿನ ಭಾವನೆಗಳನ್ನು ನಿರುಮ್ಮಳವಾಗಿ ಬಿಚ್ಚಿಡಲಾಗುವುದು ಇಲ್ಲಿಯೇ ಅಲ್ಲವಾ ? ಒಲವೆಂದರೆ ಒಮ್ಮುಖ ಭಾವವಲ್ಲ, ಬಲವಂತದ ಹೇರಿಕೆಯಿಂದ ಬರುವುದು ಸಹಾ ಅಲ್ಲ. ಅದೇಕೋ ನನಗನ್ನಿಸುತ್ತಿರುವುದು ಇಷ್ಟೇ. ನಾನು ಅವನಿಗೆ ಒಳ್ಳೆಯ ಗೆಳೆತಿಯಾಗಿ ಮಾತ್ರ ಇರಬಲ್ಲೆ. ಒಳ್ಳೆಯ ಪತ್ನಿಯಾಗಲಾರೆನೇನೋ.. ಒಲುಮೆ ಎಂಬುದು ಮನಸ್ಸಿನಿಂದ ಬರಬೇಕು. ಮಾಂಗಲ್ಯ ಬಂಧನದಿಂದ ಜೋಡಿಸುತ್ತಾರೆ. ಆದರೆ, ಮನಸ್ಸುಗಳ ಬೆಸುಗೆಯಾಗಬೇಕು ಅಲ್ಲವೇ.. ? ರಾಶಿ, ನಕ್ಷತ್ರ, ಜಾತಕ, ಗಣಕೂಟ ಎಲ್ಲವೂ ಹೊಂದಾಣಿಕೆಯಾದರೆ ಕೊಡು-ಕೊಳ್ಳುವಿಕೆಯು ಸಹಾ ಹೊಂದಾಣಿಕೆಯಾಗಬೇಕು. ಪರಿಸ್ಥಿತಿಗೆ ರಾಜಿಯಾಗಿ ಮದುವೆ ಸಹಾ ನಡೆದು ಹೋಯಿತು. ನಾವು ಎಂದಿಗೂ ಮನ ಬಿಚ್ಚಿ ಮಾತನಾಡಲಿಲ್ಲ. ಇಷ್ಟಾನಿಷ್ಟಗಳ, ಹೊಂದಿಕೆಯ ಕುರಿತು ಚರ್ಚಿಸಲಿಲ್ಲ. ಹಿರಿಯರ ಮಾತಿಗೆ ಕಟ್ಟು ಬಿದ್ದು, ಪರಿಸ್ಥಿತಿಯ ಕೈ ಗೊಂಬೆಗಳಾಗಿ ವಿವಾಹ ಬಂಧನಕ್ಕೆ ಸಿಲುಕಿದೆವು. ಮುಂದೆ ಇದೇ ರೀತಿಯ ಒತ್ತಾಯಕ್ಕೋ, ಗೃಹಸ್ಥ ಧರ್ಮ ಎನ್ನುತ್ತಲೋ ಜೊತೆಗೇ ಬದುಕು ನಡೆಸುತ್ತೇವೆ. ಹಾಸಿಗೆಯ ಸುಖಕ್ಕೆ ಪ್ರೀತಿ ಬೇಕಿಲ್ಲವಲ್ಲ. ಅವನ ಕಾಮದಾಹಕ್ಕೆ ಒಂದು ಹೆಣ್ಣು ಜೀವವಾಗಿ ನಾನಿರುತ್ತೇನೆ. ಅದನ್ನೂ ಕರ್ತವ್ಯ ಎಂಬಂತೆ ನಿಭಾಯಿಸಬೇಕಾಗುತ್ತದೆ. ಅದು ಎಲ್ಲರ ಒಪ್ಪಿಗೆಯ ಮುದ್ರೆ ಬಿದ್ದ ವ್ಯಭಿಚಾರ, ಅದಕ್ಕೆ ಹೆಸರು ಮಾತ್ರ ವಿವಾಹ ಬಂಧನ. ಈ ಭಾವಗಳು ಈಗಿನ ಕಾಲಕ್ಕೆ ಕೊಂಚ ಔಟ್ ಡೇಟೆಡ್ ಅಲ್ಲವಾ..? ನಾನು ಈ ಕಾಲಕ್ಕೆ ಹೊಂದಿಕೆಯಾಗಬಲ್ಲೆನಾ ಎಂಬ ಪ್ರಶ್ನೆ ಸದಾ ನನ್ನಲ್ಲಿ ಕಾಡುತ್ತಲೇ ಇರುತ್ತದೆ 


ನಾನು ಮಾತ್ರ ಹೀಗೆಯಾ ? ಯಾವಾಗಲೂ ನನಗನ್ನಿಸುತ್ತಿರುತ್ತದೆ, ನನ್ನಲ್ಲಿ ಭಾವಗಳೇ ಉದಿಸುವುದಿಲ್ಲವಾ ? ಅಥವಾ ಅದರಲ್ಲಿ ಪ್ರೀತಿ ಎಂಬುದು ಮಾತ್ರ ಕಾಣೆಯಾಗಿರುತ್ತದೆಯಾ ? ಭಾವಗಳೇ ಇಲ್ಲದ ನಾನು ಲೋಕದ ಕಣ್ಣಿಗೆ ಭಾವಪೂರ್ಣ ಲೇಖಕಿ. ಅಷ್ಟಕ್ಕೂ ಅವನಿಗೆ ಇದರ ಕುರಿತು ಸಣ್ಣ ಅರಿವಾದರೂ ಇರಬಹುದಾ ? ನಾನು ನನ್ನ ಬರಹವನ್ನು ಮುಂದುವರಿಸುತ್ತೇನೆಂದರೆ ಅವನು ಒಪ್ಪಬಹುದಾ ? ಅವನ ಮನೆಯವರದ್ದಾರದ್ದೂ ಆಕ್ಷೇಪ ಇರಲಾರದಾ ? ಅಥವಾ ನನ್ನ ಮನೆಯಂತೆ ಇಲ್ಲಿಯೂ ನಿರ್ಲಕ್ಷ್ಯ ತೋರಬಹುದಾ ? ಮೆಚ್ಚುಗೆಯ ಮಾತುಗಳು ಸಿಗದಿದ್ದರೂ ಚುಚ್ಚು ಮಾತುಗಳಂತೂ ಸಿಗಲಾರವೇನೋ? ನೋವು ನೀಡುವುದು ಮತ್ತೊಬ್ಬರ ಪದಗಳಲ್ಲ, ನಮ್ಮದೇ ಭಾವಗಳು, ನಮ್ಮದೇ ನಿರೀಕ್ಷೆಗಳು. ಬಹುಶಃ ನಾನೇ ಮತ್ತೊಬ್ಬರ ಕಾಳಜಿ, ಪ್ರೀತಿಯನ್ನು ನಿರೀಕ್ಷಿಸುವೆನಾ ? ನಾನು ತೋರುವ ಕಾಳಜಿ ಮತ್ತು ಪ್ರೀತಿಯನ್ನು ಸಹಾ ನಾನು ನಿರೀಕ್ಷಿಸುವುದು ತಪ್ಪಾಗುತ್ತದೆಯಾ ? ಇಷ್ಟು ದಿನದ ಹೊಂದಾಣಿಕೆ ಎಂಬ ಮುಖವಾಡದ ಬದುಕನ್ನು ಇಲ್ಲಿಯೂ ಮುಂದುವರಿಸಬೇಕಾ ? ಕೃಷ್ಣ ಎಲ್ಲವೂ ನಿನಗೇ ಅರ್ಪಿತ. ನನ್ನ ಬದುಕಿನ ಇಬ್ಬರು ಗೆಳೆಯರು ನೀವುಗಳೇ.. ಒಂದು ಡೈರಿ ಮತ್ತೊಬ್ಬ ಆರಾಧ್ಯ ದೈವ ಶ್ರೀ ಕೃಷ್ಣ. ಹೇಳಿದ ಎಲ್ಲಾ ಸತ್ಯವನ್ನು ಮತ್ತೊಬ್ಬರಿಗೆ ತಾನಾಗಿಯೇ ಬಿಚ್ಚಿಡದ ಡೈರಿ. ತಾನು ಹೇಳಿದ್ದಕ್ಕೆಲ್ಲಾ ಮುಗುಳ್ನಗೆಯಿಂದಲೇ ಉತ್ತರಿಸಿಯೂ, ಉತ್ತರಿಸದ ಶ್ರೀ ಕೃಷ್ಣ.
ಕೃಷ್ಣಾರ್ಪಣ ಮಸ್ತು ಎಂದು ಡೈರಿಯನ್ನು ಬರೆದು ಮುಚ್ಚಿಟ್ಟು ಮಲಗಿದಳು ಪರಿಣಿಕಾ

ಮದುವೆಯಂತೂ ಆಯಿತು. ಇಷ್ಟಾಕಷ್ಟಗಳ ಕುರಿತ ಚರ್ಚೆ ನಾವು ಮಾಡಲಿಲ್ಲ. ಅವರುಗಳು ಅವಕಾಶ ನೀಡಿದರು ಆದರೆ ನಾವುಗಳೇ ನಮ್ಮ ಸಂಕೋಚದ ತೆರೆ ಕಳಚಲಿಲ್ಲ. ಕೊಂಚವಾದರೂ ಮುಂದುವರಿದು ನಾನೇ ಅವಳನ್ನು ಮಾತನಾಡಿಸಬೇಕಿತ್ತೋ ಏನೋ.. ಅವಳ ಗಾಂಭೀರ್ಯತೆ ನನ್ನಲ್ಲಿ ಗೌರವ ಮೂಡಿಸುತ್ತದೆ. ಎಲ್ಲರ ಎದುರಿಗೂ ಹೆಚ್ಚು ಮಾತನಾಡುವವನು ನಾನು. ಯಾಕೋ ಅವಳ ಕಣ್ಣ ಕಾಂತಿಗೆ, ಸ್ವಚ್ಛ ನಿಷ್ಕಲ್ಮಶ ನಗುವಿಗೆ ಸೋತು ಬಿಡುತ್ತೇನೆ. ಅವಳ ಕನಸುಗಳಿಗೆ ನಾನು ರೆಕ್ಕೆ ಕಟ್ಟಬೇಕು. ವಿವಾಹ ಬಂಧನವಾಗಬಾರದು ಅವಳ ಸ್ವಾತಂತ್ರ್ಯ ಅವಳಿಗೇ ಬಿಡಬೇಕು. ನಮ್ಮತನವನ್ನು ಕೊಂದುಕೊಂಡು ಹೊಂದಿಕೊಂಡು ಬದುಕಬಾರದು, ಒಬ್ಬರನ್ನೊಬ್ಬರು ಅರಿತು ಒಂದಾಗಿ ಬಾಳಬೇಕು. ಇಷ್ಟು ದಿನ ಅವಳು ಎಲ್ಲರ ಜೊತೆಗೆ ಹೊಂದಿಕೊಂಡೇ ಬದುಕಿರುತ್ತಾಳೆ. ಅವಳ ಮೃದು ಮಾತನ್ನು ಕೇಳಿದರೆ ಹಾಗನ್ನಿಸುತ್ತದೆ. ನಾನು ನನ್ನೆಲ್ಲಾ ಮನಸ್ಸಿನ ಮಾತನ್ನು ಬಿಚ್ಚಿಡಬೇಕು. ಹಾಡು ಹಾಡಲು ಬರುವುದೇ ಅವಳಿಗೆ ? ಅವಳ ಜೇನು ದನಿಯ ಮಾತು ಕೇಳಿದರೆ ಯಾವುದೋ ವೀಣೆಯ ಸ್ವರ ಮೀಟಿದಂತಿರುತ್ತದೆ. ಪತಿ-ಪತ್ನಿಯರಾಗಿ ಬಾಳುವ ಮೊದಲು ಒಳ್ಳೆಯ ಸ್ನೇಹಿತರಾಗಬೇಕು. ಪ್ರೀತಿಯಿಂದ ಒಂದಾಗಬೇಕೇ ಹೊರತು ಕಾಮದಿಂದಲ್ಲ. ಕಾಯುವಿಕೆಗೆ ದಕ್ಕದ, ಒಲಿಯದ ಪ್ರೀತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ

ಕಾಯುವಿಕೆಯ ಅರ್ಥ ಕಲಿಸಿದವಳು ರಾಧೆಯಾದರೆ, ಪ್ರೀತಿಯ ಸಾರ್ಥಕತೆ ಮೂಡಿಸಿದವನು ಕೃಷ್ಣ. ಕೃಷ್ಣನ ಪರಮ ಭಕ್ತನಿಗೆ ಪ್ರೀತಿಯ ಪಾಠ ಮಾಡಲು ಹೇಳಿಕೊಡಬೇಕೆ? ಅಂತರ್ಮುಖ ಭಾವನೆಗಳನ್ನು ಡೈರಿಯಲ್ಲಿ ಬರೆಯುತ್ತಿದ್ದೆ. ಡೈರಿ ನನ್ನನ್ನು ಹಂಗಿಸಲಾರದು ಎಂಬ ಧೈರ್ಯದಿಂದ. ಇನ್ನು ಮುಂದೆ ನನ್ನವಳೊಡನೆ ನಾನು ಎಲ್ಲವನ್ನು ಹಂಚಿಕೊಳ್ಳಬೇಕು. ಈ ಡೈರಿಯಲ್ಲಿ ಬಿಚ್ಚಿಟ್ಟ ಭಾವಗಳು ಪದಗಳಾಗುವುದು ಕಷ್ಟ. ಈ ಡೈರಿಯನ್ನು ಅವಳಿಗೆ ನೀಡಿ ಬಿಡುತ್ತೇನೆ. ಸಂಗಾತಿಗಳಲ್ಲಿ ಮುಚ್ಚು ಮರೆ ಇರಬಾರದಲ್ಲ.
ಎಲ್ಲಕ್ಕೂ ಮುಖ್ಯವಾಗಿ ನಾನು ಇದನ್ನು ಕಂಡುಕೊಂಡ ಬಗೆಯನ್ನು ಹೇಳುವೆ. ಗಂಡಸಿಗೆ ಹೆಣ್ಣಿನ ಮನಸ್ಸು ಅರ್ಥವಾಗದು. ಭಾವಗಳಿಗೆ ಸ್ಪಂದಿಸುವ ಬಗೆ ಅಷ್ಟು ತಿಳಿಯದು. ನಾನೊಬ್ಬ ಒಳ್ಳೆಯ ಓದುಗ. ನಾನು ಹೆಚ್ಚು ಓದುವ ಬರಹಗಳು "ಸಖಿ"ಯವರದ್ದು.  ನಿಮಗೆ ಅವರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನಲ್ಲಿ ಈ ರೀತಿಯ ಆಲೋಚನೆ ಬರಲು ಕಾರಣ ಅವರು. ಬದುಕಲ್ಲಿ ಒಮ್ಮೆ ಅವರನ್ನು ಇಬ್ಬರೂ ಸೇರಿ ಭೇಟಿಯಾಗೋಣ. ಅವರ ಭಾವಚಿತ್ರ ಎಲ್ಲಿಯೂ ಇಲ್ಲ, ಹೇಗಿದ್ದಾರೋ ಗೊತ್ತಿಲ್ಲ. ಆದರೆ, ಅವರ ಬರಹಗಳು ಪ್ರಭಾವಿಸಿವೆ. ಹಸಿಬಿಸಿ ಪ್ರೇಮದ ಕುರಿತು ನನಗೆ ನಂಬಿಕೆಯಿಲ್ಲ, ಅವರ ನಿರ್ಮಲ ಪ್ರೇಮದ ಪರಿಕಲ್ಪನೆ ಮಾತ್ರ ನನ್ನನ್ನು ಅಗಾಧವಾಗಿ ಪ್ರಭಾವಿಸಿದೆ. ಇದೆಲ್ಲವನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದು ಡೈರಿಯನ್ನು ಪಕ್ಕಕ್ಕೆ ಎತ್ತಿಟ್ಟು ಮಲಗಿದ ಅಭಿನವ್.

ಎರಡೂ ಪುಟದ ಡೈರಿಯ ಭಾವಗಳೂ ಒಂದಾಗಲಿದ್ದವು. 

ಮರುದಿನ ಕಾಫಿ ಜೊತೆಗೆ ಡೈರಿಯನ್ನು ಕೊಟ್ಟ ಅಭಿನವ್, ಕಾಫಿ ಹೇಗಿದೆ ಗೊತ್ತಿಲ್ಲ, ಇಷ್ಟವಾಗದಿದ್ದಲ್ಲಿ ಹೇಳಿ.. ಬಲವಂತದ ಹೊಂದಾಣಿಕೆ ಬೇಡ. ಈ ಡೈರಿಯನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಡೈರಿಯನ್ನು ಅವಳ ಕೈಯ್ಯಲ್ಲಿಟ್ಟು ನಡೆದ ಅಭಿನವ್. ಪರಿಣಿಕಾಳದ್ದು ಮುಗುಳ್ನಗೆ ಅಷ್ಟೇ ಉತ್ತರ.


ಕಾಫಿ ಜೊತೆಗೆ ಅಭಿನವ್ ನಡವಳಿಕೆ ಅದೇಕೋ ಇಷ್ಟವಾಗಿತ್ತು ಪರಿಣಿಕಾಳಿಗೆ. ಡೈರಿಯ ಪುಟಗಳಲ್ಲಿ ಬಿಚ್ಚಿಟ್ಟಿದ್ದ ಭಾವ ತಾನು ಬಯಸಿದ್ದೇ ಆಗಿದ್ದಿತ್ತು. ತನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆತಿತ್ತು. ತಾನೇ ಮುಂದಾಗಿ ತನ್ನ ಡೈರಿಯನ್ನು ಅವನಿಗೆ ನೀಡಿದಳು. ಮೊದಲ ಪುಟ ತೆರೆದವನಿಗೆ "ಸಖಿ" ಎಂದು ಅವಳು ಬರೆದದ್ದು ಕಾಣಿಸಿತು. ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದರೆ ಅವಳ ಮುಗುಳ್ನಗು ಎಲ್ಲಕ್ಕೂ ಉತ್ತರ ಹೇಳಿತ್ತು. 

ರಾತ್ರಿ ಹುಣ್ಣಿಮೆಯ ಬೆಳದಿಂಗಳಲ್ಲಿ ಪರಿಣಿಕಾ ಹಾಡುತ್ತಿದ್ದಳು. ಕೇಳುತ್ತಾ ಮಂತ್ರಮುಗ್ದರಂತೆ ಕುಳಿತಿದ್ದರು ಅಭಿನವ್ ಮತ್ತು ಅವನ ತಂದೆ-ತಾಯಿ.. ನಂತರ ಅಭಿನವ್ ತೋಳುಗಳಲ್ಲಿ ಸೇರಿ ಹೋಗಿದ್ದಳು ಅವನ "ಸಖಿ"

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 13, 2020

ನೋಡಿ ಸ್ವಾಮಿ ನಮ್ ಇಂಜಿನಿಯರ್ಸ್ ಕತೆ


ಇಂಜಿನಿಯರಿಂಗ್ ಅನ್ನೋ ಕೋರ್ಸ್ ಗೆ ಮೊದಲಿದ್ದ ಬೆಲೆ ಈಗಿಲ್ಲ. ಪಿ.ಯು.ಸಿ ಸೈನ್ಸ್ ತೆಗೆದುಕೊಂಡ ನಂತರ ಅವರ ಮುಂದೆ ಇರುವುದು ಎರಡೇ ಚಾಯ್ಸ್ ಅನ್ನೋ ತರಹಾ ಬಿಂಬಿಸಿ ಬಿಟ್ಟಿರುತ್ತಾರೆ. ಒಂದೋ ಮೆಡಿಕಲ್, ಇಲ್ಲವೇ ಇಂಜಿನಿಯರಿಂಗ್. ಒಂದು ಕಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ ಅಂದರೆ ಬೆಲೆ ಇತ್ತು ಆದರೆ ಈಗ ಮನೆಯಲ್ಲಿ ಇಬ್ಬರು-ಮೂವರು ಇಂಜಿನಿಯರ್ ಗಳು. ಯಾಕೆ ಗೊತ್ತಾ ? 


"ಹುಡುಗಿ ಕುಳ್ಳಿ, ನೋಡೋಕೂ ಸುಮಾರು. ಇಂಜಿನಿಯರಿಂಗ್ ಮಾಡಿದ್ದಾಳೆ ಅಂದ್ರೆ ಮದುವೆ ಮಾಡೋಕು ಸುಲಭ ಆಗುತ್ತೆ" ಇದು ಹೆಚ್ಚಿನ ಹೆಣ್ಣು ಮಕ್ಕಳ ಮನೆಯಲ್ಲಿ ನಡೆಯುವ ಮಾತುಕತೆ. "ಕೆಲಸಕ್ಕೇನೂ ಕಳಿಸುವುದಿಲ್ಲ, ಆದ್ರೂ ಬಿ.ಇ ಮಾಡಲಿ" ಅನ್ನೋ ವಿಚಿತ್ರ ಮನೋಭಾವದವರು. "ಮೆಡಿಕಲ್ ಸೀಟ್ ಅಂತೂ ಸಿಗಲಿಲ್ಲ, ಕೊನೆಪಕ್ಷ ಇಂಜಿನಿಯರಿಂಗ್ ಗೆ ಆದ್ರೂ ಸೇರಿಕೊಂಡು ಮರ್ಯಾದೆ ಉಳಿಸು ಮಾರಾಯ" ಹೀಗೇ ಹೇಳುತ್ತಾ ಹೋದ್ರೆ ಪಟ್ಟಿ ಮುಗಿಯುವುದೇ ಇಲ್ಲ. 

ಬೇಕಾದ್ರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಯಾವುದೇ ಬ್ರಾಂಚ್ ಗೆ ಹೋಗಿ ಕೇಳಿದರೆ ಅಲ್ಲಿ 75% ಜನ ಮತ್ತೊಬ್ಬರ ಒತ್ತಾಯಕ್ಕೋ, ಮತ್ತಾರ ಮಾತು ಕೇಳಿಯೋ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೋ ಬಂದಿರುವುದು. ಮನೆಯಲ್ಲಿ ಮೊದಲನೇ ಮಗು ಇಂಜಿನಿಯರಿಂಗ್ ಮಾಡಿದ್ದರೆ ಎರಡನೇ ಮಗುವಿಗೂ ಇಂಜಿನಿಯರಿಂಗ್ ಫಿಕ್ಸ್. ಇವತ್ತು ಇಂಜಿನಿಯರಿಂಗ್ ಬರೀ ಡಿಗ್ರಿಯ ಹೆಸರಾಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಳ್ಳಲು ಮಾತ್ರ ಮೀಸಲಾದಂತಿದೆ. ಇಲ್ಲವೇ, ಗ್ರಾಜುಯೇಷನ್ ಡೇ ಅಲ್ಲಿಯ ಒಂದು ಫೋಟೋಗೆ ಮೀಸಲು.

ಇಂಜಿನಿಯರಿಂಗ್ ಓದಿದರೂ ಕೆಲಸ ಇಲ್ಲ, ಹತ್ತು ಸಾವಿರ ಸಂಬಳಕ್ಕೆ ಯಾವುದೋ Call Center ಗಳಲ್ಲಿ ಕೆಲಸ. ಮೇಲಿಂದ ಮೇಲೆ ಒತ್ತಡಕ್ಕೆ ಸಿಕ್ಕ ಸಿಕ್ಕ ಯಾವುದೋ ಕೆಲಸಕ್ಕೆ ಸೇರಿ ಅದನ್ನು ಬಿಡಲೂ ಆಗದೆ, ಉತ್ತಮ ಕೆಲಸಕ್ಕೆ ಸ್ಕಿಲ್ ಇಲ್ಲದೆ ಒದ್ದಾಡುವ ಪರಿ ನೋಡಿದರೆ ಅರ್ಥವಾಗುತ್ತದೆ. ಅಷ್ಟಕ್ಕೂ, ಈ ಕೆಲಸದ ಹಿಂದೆ ಇಂಜಿನಿಯರಿಂಗ್ ಕಾಲೇಜುಗಳ placement ವಿಭಾಗದವರ ಕೈವಾಡವಿದೆ. ಸತ್ಯ ಕತೆ ಏನು ಗೊತ್ತಾ.. ?

Placement ಆಗಿದೆ ಎಂದು ತೋರಿಸುವ ಬ್ಯಾನರ್ ನಲ್ಲಿ 200 ರಿಂದ 300 ಜನರ ಫೋಟೋ ಇರುತ್ತದೆ.100% placement ಎಂಬ ಒಕ್ಕಣೆ ಬೇರೆ.. ಆದರೆ, ಅಸಲಿಯತ್ತು ಏನೆಂದರೆ ಹೀಗೆ ಆ ಕಂಪನಿ 10 ರಿಂದ 15 ಕಾಲೇಜುಗಳಲ್ಲಿ ಆಷ್ಟಷ್ಟು ಜನರನ್ನು ಆಯ್ಕೆ ಮಾಡಿರುತ್ತದೆ. ಕಾಲೇಜು ಮುಗಿದು, ರಿಸಲ್ಟ್ ಪಡೆದ ನಂತರ ಅಲ್ಲಿಗೆ ಹೋದರೆ ಮತ್ತಷ್ಟು ರೌಂಡ್ ಗಳ ಇಂಟರ್ ವ್ಯೂ ಅವರಿಗಾಗಿ ಕಾದು ಕೂತಿರುತ್ತದೆ. ಇಂಟರ್ ವ್ಯೂ ಅಲ್ಲಿ ಪಾಸಾದರೂ ಯಾರದ್ದಾದರೂ ರೆಫರೆನ್ಸ್ ಅತೀ ಅಗತ್ಯ. ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ, ನಮ್ಮ ಕಾಲೇಜ್ ಕಡೆಯಿಂದ placement ಆಗಿದೆ. ಉಳಿದದ್ದು ನಿಮಗೆ ಬಿಟ್ಟದ್ದು, ಇದಕ್ಕೆ ನಾವು ಜವಾಬ್ದಾರಿಯಲ್ಲ ಎಂಬ ನಿರ್ಲಕ್ಷ್ಯದ ಉತ್ತರ. ಅಷ್ಟಕ್ಕೂ ಈ ಎಲ್ಲಾ ಘಟನೆಗಳು ನಡೆದಿರುವುದು ಸಾಫ್ಟ್ವೇರ್ ಅಥವಾ ಅವರ ಬ್ರಾಂಚ್ ಗೆ ಸಂಬಂಧಪಟ್ಟ ಕೆಲಸಕ್ಕಲ್ಲ, call center ನ, ಇಂಜಿನಿಯರಿಂಗ್ ಸಬ್ಜೆಕ್ಟ್ ಅವಶ್ಯಕತೆಯೇ ಇಲ್ಲದ ಕೆಲಸಕ್ಕೆ.

ಅಷ್ಟಕ್ಕೂ ಈ ಕೆಲಸಕ್ಕೆ ಇಷ್ಟು ಪೈಪೋಟಿ ಯಾಕೆ ಅಂತಾ ಕೇಳ್ತೀರಾ ?

ಯಾಕೆಂದರೆ, ಇಂದಿನ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ಕಿಲ್ ಗಳು ಇರುವ ಸಿಲೆಬಸ್ ಅನ್ನು ಕಲಿಸಲಾಗುತ್ತಿಲ್ಲ. Cloud computing, Artificial intelligence, machine learning ಎಲ್ಲವೂ ಮುಂಚೂಣಿಯಲ್ಲಿದ್ದರೂ ಭೋಧಿಸಲಾಗುತ್ತಿರುವುದು ಹಳೆ ಕಾಲದ ಔಟ್ ಡೇಟೆಡ್ ಸಿಲೆಬಸ್. ಹೋಗಲಿ, ಅದನ್ನಾದರೂ ಹೇಗೆ ಕಲಿಸುತ್ತಾರೆ ಗೊತ್ತಾ..? "ನಮಗೂ ಇದರ ಬಗ್ಗೆ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ, ನೋಟ್ಸ್ ಕೊಡ್ತೀವಿ ಓದಿಕೊಳ್ಳಿ ಎನ್ನುತ್ತಾ ಇಂಟರ್ನಲ್ಸ್ ಪ್ರಶ್ನೆಗಳನ್ನು ಕೊಟ್ಟು ಬಿಡುತ್ತಾರೆ." ಅರ್ಧ ಕ್ಲಾಸ್ ಆಗಲೇ ಬಂಕ್ ಮಾಡಿ ಸುತ್ತುತ್ತಿರುತ್ತಾರೆ. ಇನ್ನರ್ಧ ಕ್ಲಾಸ್ ಹೀಗೆ ಹಾಳಾಗುತ್ತಿರುತ್ತದೆ. ಇಂತಹವರ ಮಧ್ಯೆ ಅಪರೂಪಕ್ಕೆ ಕೆಲವು ಲೆಕ್ಚರರ್ ಗಳು ನಿಷ್ಠೆಯಿಂದ ಕಾನ್ಸೆಪ್ಟ್ ಅರ್ಥ ಮಾಡಿಸುತ್ತಾ ಇರುತ್ತಾರೆ. ವಿಪರ್ಯಾಸ ಏನು ಅಂದರೆ ಇಂತಹಾ ಲೆಕ್ಚರರ್ ಗಳ ಸಬ್ಜೆಕ್ಟ್ ಗಳಲ್ಲಿ ರಿಸಲ್ಟ್ ಕಡಿಮೆ, ಆದರೆ ಓತ್ಲಾ ಹೊಡೆಯುತ್ತಾ ಇಂಟರ್ನಲ್ಸ್ ಮಾರ್ಕ್ಸ್ ಕೊಟ್ಟ, ಪಾಠವೇ ಮಾಡದೆ ಪ್ರಶ್ನೆ ಕೊಟ್ಟು ಬರೆಯುವಂತೆ ಮಾಡುವ ಲೆಕ್ಚರರ್ ಸಬ್ಜೆಕ್ಟ್ ಅಲ್ಲಿ 100 % ರಿಸಲ್ಟ್.


Skillful Engineer ಗಳ ಕೊಲೆಯಾಗುವುದು ಎಲ್ಲಿ ಗೊತ್ತಾ ? ಭಾಗಶಃ ಅವರ ಲೆಕ್ಚರರ್ ಗಳಿಂದಲೇ.. ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬರೆಯಬೇಕಾದಲ್ಲಿ ಅವರು ಕೊಟ್ಟ Xerox ನ Xerox ಕಾಪಿಯಂತೆಯೇ ಅಚ್ಚಾಗಿರಬೇಕು. ಯಾಕೆಂದರೆ, ತಪ್ಪಾದರೆ ಅದನ್ನು ಸರಿ ಮಾಡುವ ವಿಧಾನ ಇಬ್ಬರಿಗೂ ಗೊತ್ತಿರುವುದಿಲ್ಲ

ಯಾವುದಾದರೂ ಇಂಜಿನಿಯರಿಂಗ್ ಮಾಡಿರುವವರನ್ನು ಕೇಳಿ ನೋಡಿ.
C program ಅಲ್ಲಿ
#include<stdio.h>
#include<conio.h>

ಈ ಎರಡು ಸಾಲುಗಳನ್ನು ಬಿಟ್ಟು ಮತ್ತೇನೂ ಗೊತ್ತಿರುವುದಿಲ್ಲ. ಕೇಳಿದರೆ ಲೆಕ್ಚರರ್ ಹೇಳಿ ಕೊಡಲಿಲ್ಲ. ಇಂಜಿನಿಯರಿಂಗ್ ಗೆ ಬಂದ ನಂತರವೂ ಲೆಕ್ಚರರ್ ಅನ್ನು ನೆಚ್ಚಿಕೊಂಡು, ಅವರ ಜೆರಾಕ್ಸ್ ನೋಟ್ಸ್ ಅನ್ನೇ ನೆಚ್ಚಿಕೊಂಡು ಇರುವುದು ಎಷ್ಟು ಸರಿ? ನಮ್ಮಷ್ಟಕ್ಕೆ ನಾವು ಗೂಗಲ್ ಮಾಡದೇ, ಟೆಕ್ಟ್ ಬುಕ್ ಓದದೇ ಇನ್ನೂ ಅವರ ಪಾಠವನ್ನೇ ನೆಚ್ಚಿಕೊಂಡು ಕೂರುವುದು ಎಷ್ಟು ಸರಿ ?

ಇನ್ನು ಇಂಜಿನಿಯರಿಂಗ್ ಪ್ರಾಜೆಕ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಪ್ರಾಜೆಕ್ಟ್ ಗಿಂತ, ಅಲ್ಲಿ ರಿಪೋರ್ಟ್ ಗೆ ಹೆಚ್ಚು ಬೆಲೆ. ಪ್ರಾಜೆಕ್ಟ್ ನಲ್ಲಿ ಏನು ಕಲಿತೆ ಎಂಬುದು ಅಲ್ಲಿ ಮುಖ್ಯವೇ ಆಗಿರುವುದಿಲ್ಲ. ರಿಪೋರ್ಟ್ ನ format ಸರಿ ಇದ್ದರೆ ಆಯಿತು. ಪೇಜ್ ತುಂಬಿಸು, ಆ ಇಮೇಜ್ ಹಾಕು, ಈ ಟೆಸ್ಟ್ ಇರಲಿ. ಪ್ರಾಕ್ಟಿಕಲ್ ಅಲ್ಲಿ ಏನೂ ಇರದಿದ್ದರೂ ರಿಪೋರ್ಟ್ ನಲ್ಲಿ ಥಿಯರಿ ತುಂಬಿಸಿಟ್ಟಿರಬೇಕು. ಇನ್ನು ಆ ಪ್ರಾಜೆಕ್ಟ್ ಅವರು ಮಾಡಿದ್ದಾ, ಯಾವುದೋ consultancy ಇಂದ ತಂದಿದ್ದಾ..? ಯಾವುದೂ ಮುಖ್ಯವಾಗುವುದಿಲ್ಲ. ಎಷ್ಟೋ ಲೆಕ್ಚರರ್ ಗಳೇ ಹೇಳುವುದೂ ಉಂಟು.. xxxx Consultancy ಗೆ ಹೋಗಿ ಎಂಬುದಾಗಿ. ಸ್ವಂತ ಕೌಶಲ್ಯದಿಂದ ಮಾಡಿದ ಪ್ರಾಜೆಕ್ಟ್ ಎಂದು ಹೇಳಿದರೆ ಅವರುಗಳು ನಂಬಲು ಸಿದ್ದವೇ ಆಗಿರುವುದಿಲ್ಲ. ಯಾಕೆಂದರೆ, ಅವರಿಗಿಲ್ಲದ ಜ್ಞಾನ ಅವರ ವಿದ್ಯಾರ್ಥಿಗಳಿಗಿದೆ ಎಂಬುದನ್ನು ಅವರು ಒಪ್ಪಲು ಸಿದ್ದವೇ ಇರುವುದಿಲ್ಲ.

ಕೆಲಸಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಲು ಯಾವುದಾದರೂ ಕೋರ್ಸ್ ಇಂದು ಅತ್ಯಗತ್ಯ. ಅದಕ್ಕೆ ಇಂಜಿನಿಯರಿಂಗ್ ಅನ್ನೇ ಮುಗಿಸಿರಬೇಕು ಎಂಬ ಅಗತ್ಯವಾದರೂ ಏನು ? ಆ ಕೋರ್ಸ್ ಮುಗಿಸಿ ಕೆಲಸಕ್ಕೆ ಬೇಕಾದ ಸ್ಕಿಲ್ ಪಡೆದುಕೊಂಡರೆ ಸಾಕಲ್ಲವಾ ??

ಎಂಜಿನಿಯರಿಂಗ್ ನ ಪಾಸಿಂಗ್ ಮಾರ್ಕ್ಸ್ 35. ಮೆಡಿಕಲ್ ನಲ್ಲಿ ಕೂಡಾ ಹೀಗೆಯಾ.. ? ಪಾಸಿಂಗ್ ಮಾರ್ಕ್ಸ್ ಮಾತ್ರ ಪಡೆದರೆ ಅಲ್ಲಿ ರೋಗಿಗಳು ಫೇಲ್ ಆಗಬೇಕಾಗುತ್ತದೆ.ಆದರೆ, ಇಂಜಿನಿಯರಿಂಗ್ ನ ವಿಶೇಷ ಅಂದರೆ 8 ವರ್ಷ ಸಮಯ ಇರುತ್ತದೆ, ಅಷ್ಟರೊಳಗೆ ಇಂಜಿನಿಯರಿಂಗ್ ಮುಗಿಸಿದಲ್ಲಿ ಆಯಿತು. ಅದೂ ಪಾಸಿಂಗ್ ಮಾರ್ಕ್ಸ್ ತೆಗೆದರೆ ಸಾಕು, ಬ್ಯಾಕ್ ಆಗಿರುವುದನ್ನು 2 ವರ್ಷದೊಳಗೆ ಪಾಸ್ ಮಾಡಿಕೊಳ್ಳುತ್ತಾ ಪಾಸ್ ಆದರೂ ಸಾಕು. ಯಾರೂ ಇಂಜಿನಿಯರಿಂಗ್ ಅನ್ನು ಎಷ್ಟು ವರ್ಷದೊಳಗೆ ಮುಗಿಸಿದೆ ಎಂದು ಕೇಳುವುದಿಲ್ಲ, ಎಷ್ಟು ಬಾರಿ ಒಂದು ಸಬ್ಜೆಕ್ಟ್ ಅನ್ನು ಬರೆದು ಪಾಸ್ ಮಾಡಿದೆ ಎಂದು ಕೇಳಲಾರರು, ಇಂಜಿನಿಯರಿಂಗ್ ಮುಗಿಸಿದರೆ ಆಯಿತು.

ಇಂಜಿನಿಯರಿಂಗ್ ಗೆ ಮೊದಲಿದ್ದ ಬೆಲೆ ಇಲ್ಲ, ಬೆಲೆ ಕಡಿಮೆ ಮಾಡಿರುವವರು ನಾವುಗಳೇ ಎಂಬುದೂ ಸುಳ್ಳಲ್ಲ. ಈಗ ಅದು ಕೂಡಾ ಹತ್ತರಲ್ಲೊಂದು ಡಿಗ್ರಿ ಎಂಬಂತಾಗಿದೆ. ವಿಶ್ವೇಶ್ವರಯ್ಯನವರಂತಹಾ ಇಂಜಿನಿಯರ್ ಗಳು ಈಗಿಲ್ಲ, ಅವರಿಗಿದ್ದಂತಹಾ ಗುರುಗಳು ಈಗ ಹುಡುಕಿದರೂ ಸಿಗಲಾರರು. ಎಲ್ಲೋ 5% ಅಂತಹವರು ಸಿಗಬಹುದಷ್ಟೇ.

ಇಂಜಿನಿಯರಿಂಗ್ ಹಿಂದಿರುವ ಕತೆಗಳನ್ನು ಯಾರೂ ಬಿಚ್ಚಿಡಲಾರರು. ಎಷ್ಟೋ ಡ್ಯಾನ್ಸರ್ಗಳನ್ನು, ಹಾಡುಗಾರರನ್ನು, ಚಿತ್ರಕಾರರನ್ನು, ಕತೆಗಾರರನ್ನು ಇಂಜಿನಿಯರಿಂಗ್ ತನ್ನೊಳಗೆ ಹುದುಗಿಸಿಕೊಂಡು ಕಾಲಚಕ್ರದೊಡನೆ ಸಾಗುತ್ತಿದೆ. ಹಣ ಇರಬಹುದು ಸಂತಸ..?
ಇದಕ್ಕೆ ಅವರವರೇ ಉತ್ತರಿಸಬೇಕು. ಇಂದು ನಾನು ಒಬ್ಬ ಇಂಜಿನಿಯರ್ ಎಂದು ಹೆಮ್ಮೆಯಿಂದ ಹೇಳುವವರು ಬಹಳ ಕಡಿಮೆ.
Happy Engineers ಗಿಂತಲೂ Frustrated Engineers ಹೆಚ್ಚಾಗುತ್ತಿದ್ದಾರೆ. 

"ನಾನು ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವವರು ಹೆಚ್ಚಾಗಲಿ. ಇಂಜಿನಿಯರಿಂಗ್ ನಲ್ಲಿ ಕಲಿತಷ್ಟೂ ಕಲಿಯುವುದು ಇದ್ದೇ ಇದೆ. ಕಲಿಯುವ ಮನಸ್ಸು, ಉತ್ಸಾಹ ಬೇಕಷ್ಟೇ.. ಹೇಗೋ ಇಂಜಿನಿಯರಿಂಗ್ ಅನ್ನು ಸೇರಿ ಆಗಿದೆ, ಹೇಗೋ ಮುಗಿಸುವೆ ಎಂಬ ಇರಾದೆ ಬೇಡ. ಕಲಿತದ್ದನ್ನು ಬಳಸಿಕೊಂಡು ಒಳ್ಳೆಯ ಇಂಜಿನಿಯರ್ ಗಳಾಗಿ.

ಕೃಷಿ ಕ್ಷೇತ್ರಕ್ಕೆ ಅತ್ಯುತ್ತಮ ಆಟೊಮ್ಯಾಟಿಕ್ ಯಂತ್ರ ಅಳವಡಿಸಿರುವ ಇಂಜಿನಿಯರ್ ತಂದೆ ಇಂದು ಇನ್ನು ಎತ್ತನ್ನು ಉಪಯೋಗಿಸಿಕೊಂಡೇ ಉಳುಮೆ ಮಾಡುತ್ತಿರುವುದು ವಿಪರ್ಯಾಸ. 

ಯಾರು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವರೋ ಅವರೇ ನಿಜವಾದ ಇಂಜಿನಿಯರ್ ಗಳು. ಇಂಜಿನಿಯರಿಂಗ್ ಮುಗಿಸಿದರಷ್ಟೇ ಸಾಲದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.

Anyway, ಹ್ಯಾಪಿ ಇಂಜಿನಿಯರ್ ಗಳಿಗೂ, Frustrated ಇಂಜಿನಿಯರ್ ಗಳಿಗೂ Happy Engineers Day


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2020

'ಅ'ಲ್ಲಿಂದ Eಲ್ಲಿಯವರೆಗೂ ('ಅ' ಯಿಂದ E-learning ವರೆಗೂ)

 

ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಹಾಗೆಯೇ ಶಿಕ್ಷಕರೂ ಸಹಾ ಬದಲಾಗಿದ್ದಾರೆ. ಆದರೆ, ಗುರುಗಳು ಎಂದರೆ ಇಂದಿಗೂ ನೆನಪಾಗುವಂತೆ ಹೆಜ್ಜೆ ಮೂಡಿಸಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ.


ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸುವಂತೆ ಹೇಳಿದ ರಾಧಾಕೃಷ್ಣನ್ ರವರನ್ನು ನೆನೆಯುವುದು ಅಗತ್ಯ. 

ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ಸರ್ ಮತ್ತೊಬ್ಬರು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ಅವರ ಕುತೂಹಲಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಗುರುಗಳು ಅವರು.

ಎಷ್ಟೋ ವಿರೋಧಗಳ ನಡುವೆಯೂ ಮಹಿಳಾ ಶಿಕ್ಷಕಿಯಾಗಿ ವಿದ್ಯೆಯ ಹಣತೆ ಹಚ್ಚಿದ ಸಾವಿತ್ರಿಬಾಯಿ ಫುಲೆ ಮತ್ತೋರ್ವ ಮಹಾನ್ ಗುರು

ಗುರು ಎಂದರೆ, ನೀತಿ ಎಂದರೆ ಇತಿಹಾಸದಲ್ಲಿ ನೆನಪಾಗುವುದು ಚಾಣಕ್ಯ. ಆತನ ತಂತ್ರಗಾರಿಕೆ, ಶಿಷ್ಯನ ಸಾಮ್ರಾಜ್ಯ ನಿರ್ಮಾಣದಲ್ಲಿ ಮಾಡಿದ ಉಪದೇಶ ಇಂದಿಗೂ ಆತನನ್ನು ಎತ್ತರದ ಸ್ಥಾನದಲ್ಲಿಟ್ಟಿವೆ.

ಎಲ್ಲಾ ಯುವಕರಿಗೂ ಗುರುವಾದ ವಿವೇಕಾನಂದರು, ಮತ್ತವರ ಗುರುಗಳಾದ ರಾಮಕೃಷ್ಣ ಪರಮಹಂಸರು ಇಬ್ಬರೂ ಇಂದಿಗೂ ಲೋಕಮಾನ್ಯರು. ಪರಮಹಂಸರಂತಹಾ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡದ್ದು ವಿವೇಕಾನಂದರು.

ಮಹಾಭಾರತದ ದ್ರೋಣರು ಮತ್ತೊಬ್ಬ ಮಹಾನ್ ಗುರು. ಮಗ ಮತ್ತು ಶಿಷ್ಯರ ನಡುವೆ ಭೇಧ ಮಾಡದೆ ಶಿಷ್ಯರನ್ನೂ ಮಕ್ಕಳಂತೆ ಕಂಡವರು. ದ್ರೋಣರಂತಹಾ ಗುರುಗಳಿಂದ ರೂಪುಗೊಂಡ ಅರ್ಜುನ. ದ್ರೋಣರ ಪ್ರತಿಮೆಯಿಂದಲೇ ಸ್ಫೂರ್ತಿಗೊಂಡ ಏಕಲವ್ಯ.

ಸಾಂದೀಪನಿಯಂತಹಾ ಗುರುಗಳಿಂದ ಕಲಿತ ಶ್ರೀ ಕೃಷ್ಣ.

ಶಿಕ್ಷಕರು ವಿದ್ಯೆ ಕಲಿಸಿದಂತೆ, ಶಪಿಸಿದವರು ಸಹಾ ಇದ್ದಾರೆ.
ಹರ ಮುನಿದರೆ ಗುರು ಕಾಯ್ವನು
ಗುರು ಮುನಿದರೆ..??
ಪರಶುರಾಮ ಮತ್ತು ಕರ್ಣರ ಗುರು-ಶಿಷ್ಯರ ಸಂಬಂಧ ಇದಕ್ಕೆ ಸಾಕ್ಷಿ.

ಶಿಕ್ಷಣ ಬದಲಾಗಿದೆ. ಶಿಕ್ಷಕರು ಸಹಾ ಬದಲಾಗಿದ್ದಾರೆ. ಮೌಲ್ಯಗಳು ಸಹಾ ಬದಲಾಗುತ್ತಿವೆ. ವಿದ್ಯಾರ್ಥಿಗಳು ಬದಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆ ತಪ್ಪಿದ್ದೆಲ್ಲಿ ?
ಯಾವಾಗಲೂ ನನ್ನ ಪ್ರಿನ್ಸಿಪಾಲ್ ಸರ್ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ

If Money is Lost , Nothing is Lost
If Health is Lost, Something is Lost
If Character is Lost, Everything is Lost

ಈಗ ಬದಲಾದ ದಿನಮಾನದಲ್ಲಿ ಈ ಮಾತು ಬದಲಾಗಿದೆ.

If Character is Lost , Nothing is Lost
If Health is Lost, Something is Lost
If Money is Lost, Everything is Lost

ಇದೇ ಬದಲಾವಣೆ ಯುವಜನತೆಯ ಹಾದಿ ತಪ್ಪಿಸಿ, ಮಾದಕ ವ್ಯಸನಕ್ಕೆ, ಸುಲಭ ರೀತಿಯಲ್ಲಿ ಹಣ ಸಂಪಾದಿಸಲು ಪ್ರಚೋದಿಸುತ್ತಿರುವುದು.

ಆಗ ಶಿಕ್ಷೆ ಇತ್ತು, ತಪ್ಪಿದಲ್ಲಿ ತಿದ್ದಿ ನಡೆಸುವ ಗುರುಗಳಿದ್ದರು. ಆದರೆ, ಈಗ ತಪ್ಪಿಗೆ ಶಿಕ್ಷೆ ನೀಡಲು
ವಿದ್ಯೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವರು. ಆದರೆ, ಇವತ್ತು ವಿದ್ಯೆ ಕೆಲಸಕ್ಕಾಗಿ ಮಾತ್ರವೇ. ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇರದು. ಕೆಲಸಗಳು ಹಣಕ್ಕಾಗಿ ಮಾರಾಟವಾಗುತ್ತಿವೆ. ವಿದ್ಯೆಯೂ ಮಾರಾಟವಾಗುತ್ತಿದೆ.

ಶಾಲೆಯಲ್ಲಿ ಕಲಿಸದೆ ಟ್ಯೂಷನ್ ಗೆ ಬನ್ನಿ ಇಂದು ಹೇಳುವ ನೀತಿಗೆಟ್ಟ ಶಿಕ್ಷಕರಿದ್ದಾರೆ. ಪ್ರಾಜೆಕ್ಟ್ ಫೈನಲ್ ಗೆ, Thesis submission ಗೆ, ಪ್ರತಿಯೊಂದು ಸಹಿಗೂ ಹಣ ಕೇಳುವ ಶಿಕ್ಷಕರಿದ್ದಾರೆ. ಎಂಜಲು ಕಾಸಿಗೆ ಕೈಯೊಡ್ಡುವ ಶಿಕ್ಷಕರಿಂದ ಸ್ವಾಭಿಮಾನದ ಪಾಠವನ್ನು ವಿದ್ಯಾರ್ಥಿಗಳು ಕಲಿಯುವುದಾದರೂ ಹೇಗೆ ?

ವಿದ್ಯೆ ಕಲಿಸದಾ ತಂದೆ
ಬುದ್ದಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ ತಾಯಿ
ಶುದ್ಧ ವೈರಿಗಳು ಸರ್ವಜ್ಞ

ಎಂಬ ಸರ್ವಜ್ಞನ ವಚನವೇ ಇದೆ.

ಇನ್ನೊಂದು ಬಗೆಯ ಶಿಕ್ಷಕ ವರ್ಗವಿದೆ. ತಮ್ಮ ಕೆಲಸದ ಶುರುವಿನಲ್ಲಿ ಪ್ರಾಮಾಣಿಕರಾಗಿಯೇ ಇರುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳನ್ನು ನೋಡಿಯೋ ಅಥವಾ ಮೇಲಿನ ಒತ್ತಡಕ್ಕೆ ಮಣಿದು ತಮ್ಮತನವನ್ನು ಬದಲಾಯಿಸಿಕೊಂಡವರಿದ್ದಾರೆ.

ಇವೆಲ್ಲದರ ನಡುವೆ ತಮ್ಮತನವನ್ನು ಉಳಿಸಿಕೊಂಡು, ಪ್ರಾಮಾಣಿಕತೆಯ ಪಾಠ ಮಾಡುತ್ತಿರುವ ಶಿಕ್ಷಕರು ಸಹಾ ಇದ್ದಾರೆ. ಅಂತಹವರಿಗೆ ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು".

ವಿದ್ಯೆ ಕಲಿಸಿಯೂ ಶಿಕ್ಷಕರಾಗದವರು ಹಲವರಿದ್ದಾರೆ, ಅಕ್ಷರವೇ ಗೊತ್ತಿರದ ಜೀವನದ ಪಾಠ ಕಲಿಸಿದ ಹಲವಾರು ಶಿಕ್ಷಕರ ಸ್ಥಾನದಲ್ಲಿದ್ದಾರೆ. ತಾಯಿ, ತಂದೆ, ಕಿರಿಯರಿಂದ ಹಿರಿಯರವರೆಗೂ ಗುರುಗಳಾಗುತ್ತಾರೆ. ಆದರೆ, ಈಗ ಇದೆಲ್ಲದರ ಸ್ಥಾನವನ್ನು ಗೂಗಲ್ ತುಂಬುತ್ತಿದೆ. ಗೂಗಲ್ ಜ್ಞಾನವೇ ಶ್ರೇಷ್ಠ ಎಂಬ ಅಜ್ಞಾನಿಗಳೂ ಇದ್ದಾರೆ.  

ಈಗ ಮನೆ ಮನೆಗೂ ಮೊಬೈಲ್ ಮೂಲಕ "E-Learning" ಕಾಲಿಟ್ಟಿದೆ. ಶಿಕ್ಷಣ ನೇರವಾಗಿ ದೊರೆಯುತ್ತಿದೆ. ಲೈಂಗಿಕ ಕಿರುಕುಳವಿಲ್ಲ, ಪ್ರತಿಯೊಂದು ಚರ್ಯೆ, ಮಾತಿಗೂ ದಾಖಲೆ ಇದ್ದೇ ಇದೆ. ಆದರೆ, ವಿದ್ಯಾರ್ಥಿಗಳ ನಿಷ್ಠೆ ಕಾಣೆಯಾಗಿದೆ. ಆನ್ಲೈನ್ ಕ್ಲಾಸ್ ಆನ್ ಮಾಡಿ ಮತ್ತೇನೋ ಮಾಡುವುದು, ಆನ್ಲೈನ್ ಟೆಸ್ಟ್ ಗಳನ್ನು ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಉತ್ತರಿಸುವುದು. ಹೀಗೆ..
ತಿಳುವಳಿಕೆ ಹೆಚ್ಚಿದಂತೆಲ್ಲಾ, ಧೂರ್ತ ನಡವಳಿಕೆಗಳು ಹೆಚ್ಚುತ್ತಲೇ ಇವೆ

ಇಂತಹವರು ನೋಡಿ ಕಲಿಯಬೇಕಾದದ್ದು. ಸುಧಾಮೂರ್ತಿ ಮೇಡಂ ಅವರನ್ನು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಗುರುಗಳಿಗೆ ಗೌರವ ಸಲ್ಲಿಸುವ ಗುಣ ತೊರೆದಿಲ್ಲ. ಶಿಕ್ಷಕರಾಗಿ ಮಕ್ಕಳಿಗೆ ತಿಳುವಳಿಕೆ ಹೇಳುವುದನ್ನು ಸಹಾ ಬಿಟ್ಟಿಲ್ಲ. 

ಕಲಿಯಬೇಕೆಂದರೆ ಎಲ್ಲೆಲ್ಲೂ ಒಳ್ಳೆಯ ವಿಚಾರಗಳಿವೆ. ಅರಿವಿಗಿಂತ ದೊಡ್ಡ ಗುರುವಿಲ್ಲ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು. ಗುರುವನ್ನು ಆಯ್ದುಕೊಳ್ಳುವ ನಮ್ಮ ಆಯ್ಕೆ ಸರಿಯಿದ್ದಲ್ಲಿ ಎಲ್ಲವೂ ಸುಸೂತ್ರ.

"ಅರಿವೆಂಬ ಗುರುವಿಗೆ ನಮಿಸುತ್ತಾ" ಜೀವನದ, ಅಕ್ಷರದ ತಿಳುವಳಿಕೆಯ ಎಲ್ಲಾ ಪಾಠ ಕಲಿಸಿದ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 'ಅ'ಲ್ಲಿಂದ 'E'ಲ್ಲಿಯವರೆಗೂ ಬದುಕಿನ ಹಾದಿಯ ಜೊತೆಗಿರುವ ಎಲ್ಲ ಶಿಕ್ಷಕರ ಆಶೀರ್ವಾದಗಳು ಸದಾ ಹೀಗೆಯೇ ಇರಲಿ.

ಸಾವಿರಾರು ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ
ಕನ್ನಡಿಯ ಪಾಲಿಗೇ..?

ಎಂಬ ಸಾಲುಗಳು ಶಿಕ್ಷಕರ ಬದುಕಿನಲ್ಲಿ ಹೆಚ್ಚಿನಂಶ ಅನ್ವಯವಾಗುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗಿನ ಕೆಲಸ ಮಾತ್ರವಲ್ಲ. ಸದಾ ಕಲಿಯುತ್ತಲೇ ಇರಬೇಕು, ಕಲಿಸುತ್ತಲೇ ಇರಬೇಕು. ಸ್ಫೂರ್ತಿ ತುಂಬುತ್ತಿರುವ, ಕಲಿಕೆಯ ಮನಸ್ಸಿನ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 30, 2020

ಸಿರಿಗೌರಿಯ ಸದಾಶಿವ-೪

 


ಅಶುತೋಷ್ ನಿಗೆ ಕ್ಷಣ ಕ್ಷಣವೂ ಯುಗದಂತೆ ಭಾಸವಾಗತೊಡಗಿತು. ಕಾಯುವಿಕೆಯ ಮೇಲೆಯಷ್ಟೇ ಸಮಯದ ಪರಿವೆಯ ನಿರ್ಧಾರ ಸಾಧ್ಯ. ತಕ್ಷಣವೇ ನಂದನ್ ಗೆ ಡಯಲ್ ಮಾಡಿದ.ನಂದನ್ ಹೇಳಿದ ಮಾತು ಕೇಳಿ ಅವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. 


ಅಪರ್ಣಾ ಅಲ್ಲಿಂದ ಹೊರಟ ನಂತರ ನಂದನ್ ಕೂಡಾ ಅವಳನ್ನು ಹಿಂಬಾಲಿಸಿದ. ಅಲ್ಲೇ ಹೊರಗೆ ವಾಚ್ ಮ್ಯಾನ್ ಜೊತೆಗೆ ಆಡುತ್ತಿದ್ದ ಅಥರ್ವನನ್ನು ಕರೆದುಕೊಂಡು ಹೊರಟಳು. 

ಅಥರ್ವ ಇಲ್ಲಿಗೆ ಮೊದಲ ಬಾರಿಗೆ ಬಂದದ್ದೇನೂ ಅಲ್ಲ. ಅಥರ್ವ ಬಂದಾಗಲೆಲ್ಲಾ ಆಡುತ್ತಿದ್ದದ್ದು ವಾಚ್ ಮ್ಯಾನ್ ಶಾಂತಪ್ಪನ ಜೊತೆಗೆ. ಅಥರ್ವ ಎಲ್ಲರಂತೆ ಸಾಮಾನ್ಯ ಮಗುವಲ್ಲ, ಅವನು ವಿಕಲ ಚೇತನ ಮಗು. ಅಥರ್ವನಿಗೆ ಬಲಗಾಲು ಊನವಾಗಿತ್ತು. ಎಲ್ಲರಂತೆ ನಡೆದುಕೊಂಡು, ಓಡಾಡಿಕೊಂಡು ಇರುವ ಭಾಗ್ಯ ಅವನಿಗಿರಲಿಲ್ಲ. ಅವನು ನಡೆದಾಡಬೇಕಿದ್ದಲ್ಲಿ ಮತ್ತೊಬ್ಬರ ಸಹಾಯ ಪಡೆಯಬೇಕಿತ್ತು. ಈಗಷ್ಟೇ ಕೆಲ ದಿನಗಳ ಹಿಂದೆ ಅವನಿಗೆ ಆಪರೇಷನ್ ಕೂಡಾ ಆಗಿತ್ತು. ಅವನು ಸ್ವತಃ ನಡೆದಾಡಬಲ್ಲನಾದರು ಕೊಂಚ ಕುಂಟುವಿಕೆ ಇದ್ದೇ ಇತ್ತು. ಐದಾರು ವರ್ಷದ ಪುಟ್ಟ ಮಗುವನ್ನು ಆ ಸ್ಥಿತಿಯಲ್ಲಿ ನೋಡುವುದು ಎಲ್ಲರಿಗೂ ಮರುಕ ಹುಟ್ಟುವಂತಿತ್ತು. 

ಅಪರ್ಣ ಅಥರ್ವನನ್ನು ಕಂಡದ್ದು "ಕರುಣಾಳು" ಎಂಬ ಅನಾಥಾಶ್ರಮದಲ್ಲಿ. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಡೆಸುತ್ತಿದ್ದ ಅನಾಥ ಮಕ್ಕಳ ಮತ್ತು ವೃದ್ದಾಶ್ರಮದ ಸಂಸ್ಥೆ ಅದು. "ಕರ್ಮಭೂಮಿ"ಯ ಹಲವಾರು ಸಾಮಾಜಿಕ ಕಳಕಳಿಯ ಸೇವೆಗಳಲ್ಲಿ ಅದು ಕೂಡಾ ಒಂದು. ಅಪರ್ಣಾ ಒಮ್ಮೆ "ಕರುಣಾಳು" ಆಶ್ರಮಕ್ಕೆ ಹೋದಾಗ ಅಲ್ಲಿ ಕಂಡದ್ದು ಅಥರ್ವನನ್ನು. ಅವಳು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದಾಗ ಅಲ್ಲೊಂದು ಒಂದೂವರೆ-ಎರಡು ವರ್ಷದ ಪುಟ್ಟ ಕಂದ ತೆವಳುತ್ತಾ ಕೂತಿತ್ತು. ಅಲ್ಲಿ ಮೇಲೆ ತೂಗು ಹಾಕಿದ್ದ ಕನ್ನಡಿಯಲ್ಲಿ ಅವನ ಬಿಂಬವನ್ನು ಅವನೇ ಕಾಣುವಾಸೆ. ಆದರೆ ಎದ್ದು ನಿಲ್ಲಲಾಗದ್ದು, ಬಂದವರತ್ತ ದೈನ್ಯದಿಂದ ಎತ್ತಿಕೋ ಎಂದು ಕೈ ಚಾಚುತ್ತಿದ್ದ. ಅಪರ್ಣಾಳೊಳಗಿದ್ದ ಮಾತೃ ವಾತ್ಸಲ್ಯ ಜಾಗೃತವಾದ ಹೊತ್ತು. ಅಶುತೋಷ್ ನೊಡನೆ ಮದುವೆಯಾಗಿ ಕಳೆದದ್ದು ಆರು ತಿಂಗಳಷ್ಟೇ.. ಯಾಕೋ ಈ ಮಗುವನ್ನು ತನ್ನ ಮಗುವನ್ನಾಗಿ ಸಾಕಬೇಕು ಎನ್ನಿಸಿಬಿಟ್ಟಿತ್ತು. ಅವನ ತೊದಲು ನುಡಿ, ಮುಗ್ಧತೆ ಎಲ್ಲವೂ ಅವಳನ್ನು ಸೆಳೆದಿತ್ತು.

ಅವನು "ಕರುಣಾಳು"ವಿಗೆ ಬಂದು ಒಂದೂವರೆಯಿಂದ ಎರಡು ವರ್ಷ ಕಳೆದಿತ್ತು. ಪಕ್ಕದ ಬೀದಿಯ ಕಸದ ತೊಟ್ಟಿಯ ಪಕ್ಕದಲ್ಲಿ ಕಣ್ಣೇ ಬಿಟ್ಟಿರದ ಕಂದ ಅಳುತ್ತಿತ್ತು. ಅದರ ಧ್ವನಿ ಅತ್ತೂ ಅತ್ತೂ ಉಡುಗಿ ಹೋಗಿತ್ತು. ಯಾವ ಪಾಪಿಯ ಹೊಟ್ಟೆಯಲ್ಲಿ ಹುಟ್ಟಿತ್ತೋ ಆದರೆ ಪುಣ್ಯವಂತರ ಮನೆ ಸೇರುವ ಭಾಗ್ಯವಿತ್ತು ಎನ್ನಿಸುತ್ತದೆ. ಬೀದಿ ನಾಯಿಗಳ ಕಾಟ ಜೋರಾಗಿದ್ದ ಕಾಲ, ಆದರೆ ಮಗುವಿನ ಅದೃಷ್ಟವೋ ಏನೋ ಮಗುವಿಗೆ ಏನೂ ಆಗಿರಲಿಲ್ಲ. "ಕರುಣಾಳು" ಆಶ್ರಮದ ವೃದ್ದಾಶ್ರಮದಲ್ಲಿದ್ದ ವೃದ್ಧರೊಬ್ಬರಿಗೆ ಬೆಳ್ಳಂಬೆಳಗ್ಗೆ ವಾಕ್ ಹೋಗುವ ಅಭ್ಯಾಸವಿತ್ತು. ಅವರ ಕಣ್ಣಿಗೆ ಬಿದ್ದಿದ್ದ ಈ ಮಗು ಅನಾಥಾಶ್ರಮದಲ್ಲಿ ಬೆಳೆಯುತ್ತಿತ್ತು. ಅಕ್ರಮ ಸಂತಾನದ ಫಲವೋ, ತಾಯಿಗೆ ಯಾವ ಕಷ್ಟವೋ ತಾಯಿ ಮಡಿಲಿನಿಂದ ಹೊರ ದಬ್ಬಲ್ಪಟ್ಟಿದ್ದ. ಹೆಣ್ಣು ಮಕ್ಕಳು ಪೋಷಣೆಗೆ ಕಷ್ಟವಾಗಬಹುದೆಂದು ಹಲವರು ಹೆಣ್ಣು ಮಕ್ಕಳನ್ನು ಹೀಗೆ ಬೀದಿಗೆ ಬಿಸಾಡುವುದುಂಟು. ಆದರೆ, ಈ ಮಗು ಯಾವ ಕಾರಣಕ್ಕೆ ಹೀಗೆ ಬೀದಿಗೆ ಬಿದ್ದಿತ್ತೋ ಗೊತ್ತಿಲ್ಲ, ಕಾಲಿನ ಉನವೂ ಕಾರಣವಾಗಿರಬಹುದು. ಹಲವಾರು ಜನರು ಅಲ್ಲಿಂದ ಮಕ್ಕಳನ್ನು ದತ್ತು ಪಡೆಯಲು ಬಂದಿದ್ದರು. ಹಲವಾರು ಜನರು ಈಗೀಗ ಹೆಣ್ಣು ಮಕ್ಕಳನ್ನು ದತ್ತು ಪಡೆಯಲಿಚ್ಛಿಸುತ್ತಾರೆ. ಅವನ ಓರಗೆಯ ಮಕ್ಕಳೆಲ್ಲಾ ಒಂದು ನೆಲೆ ಕಂಡರೂ ಇವನು ಇಲ್ಲೇ ಉಳಿದು ಬಿಟ್ಟ. ಕಾಲಿನ ಊನ ಕೂಡಾ ಅದಕ್ಕೆ ಕಾರಣವಾಗಿತ್ತೋ ಏನೋ. ಕೆಲವೊಮ್ಮೆ ಅದೃಷ್ಟ ತಡವಾಗಿ ಬಾಗಿಲು ಬಡಿಯುತ್ತದೆ ಕಾಯುವ ತಾಳ್ಮೆ ಇರಬೇಕಷ್ಟೇ.. ಅವನ ಅದೃಷ್ಟ ಅಪರ್ಣಾಳ ರೂಪದಲ್ಲಿತ್ತು.

ನೋಡಿದವರಿಗೆ ಇದೆಂತಹಾ ಹುಚ್ಚು ಆಸೆ ಎನ್ನಿಸಬಹುದು, ತಮಗೆ ಮಕ್ಕಳಾಗುವ ಹೊತ್ತಲ್ಲಿ ಈ ಮಗು ಬೇಕಾ ? ಎಂಬ ಭಾವ ಮೂಡುವುದಂತೂ ಸುಳ್ಳಲ್ಲ. ಆದರೆ, ಅಪರ್ಣಾಳ ಅತ್ತೆ-ಮಾವ ಉದಾರ ಹೃದಯವರು. ಹಣದಲ್ಲಿ ಮಾತ್ರವಲ್ಲ ಗುಣದಲ್ಲಿಯೂ ಸಿರಿವಂತರೇ.. ಎಂಬುದನ್ನು ನಿರೂಪಿಸಿಬಿಟ್ಟರು. ಆದರೆ, ಅಶುತೋಷ್ ನಿಗೆ ಆಗಲೇ ಯಾಕೋ ಈ ವಿಚಾರದಲ್ಲಿ ಕೊಂಚ ವಿರೋಧವಿದ್ದಂತಿತ್ತು. ದತ್ತು ಮಗುವಿನ ಅವಶ್ಯಕತೆ ಇಲ್ಲ ಎಂಬ ಧಾಟಿಯಲ್ಲಿ ಅವನಿದ್ದ. ಬಾಯಿ ಬಿಟ್ಟು ಏನನ್ನೂ ಆಡದಿದ್ದರೂ, ಅವನ ಚರ್ಯೆಯಲ್ಲಿ ಅದೇಕೋ ಅಪಶೃತಿ ಇತ್ತು. ಪುಟ್ಟ ಕಂದ ಮನೆಗೆ ಬಂದ ನಂತರ ಮನೆಯ ವಾತಾವರಣ ಬದಲಾಗಿ ಹೋಯಿತು. ಅವನಿಗೆ "ಅಥರ್ವ" ಎಂಬ ನಾಮಕರಣ ನಡೆಯಿತು. ಅಶುವಿನ ಚರ್ಯೆಯೂ ಬದಲಾಯಿತು. ಪುಟ್ಟ ಅಥರ್ವನೊಂದಿಗೆ ಕಾಲ ಕಳೆಯುವಾಗಲೆಲ್ಲಾ  ಅವನ ಮುಖದಲ್ಲಿ ಯಾವುದೋ ಅವ್ಯಕ್ತ ನೋವಿನ ಛಾಯೆಯಿತ್ತು.

ಅಥರ್ವ ಕೆಲ ಸಂಧರ್ಭದಲ್ಲಿ, ಕಾರ್ಯಕ್ರಮಗಳಲ್ಲಿ ಅಥವಾ ಅಶುತೋಷ್ ಅಪರ್ಣರೊಂದಿಗೆ "ಕರ್ಮಭೂಮಿ"ಗೆ ಬರುವುದಿತ್ತು. ಅವನಿಗೆ ಕಚೇರಿಯಲ್ಲಿ ಹಿಡಿದಿಟ್ಟ ವಾತಾವರಣ ಬೇಕಿರಲಿಲ್ಲ, ಬೆಳೆಯುವ ಮಕ್ಕಳು ಸ್ವಾತಂತ್ರ್ಯ ಬಯಸುತ್ತಾರೆ, ಅದರಲ್ಲೂ ಇತರರೊಂದಿಗೆ ಬೆರೆಯುವ, ಆಟವಾಡುವ ಇಚ್ಛೆ ಹೊಂದಿರುತ್ತಾರೆ. ಅಥರ್ವನಿಗೆ ಆ ಅನುಕಂಪದ ನೋಟ, ಸಿರಿವಂತಿಕೆಯ ಆವರಣದಿಂದ ಈಚೆ ಬರಬೇಕಿತ್ತು. ಆತ ಇಲ್ಲಿಗೆ ಬಂದಾಗಲೆಲ್ಲಾ ಆಡುತ್ತಿದ್ದದ್ದು ವಾಚ್ ಮ್ಯಾನ್ 'ಶಾಂತಪ್ಪ'ನೊಂದಿಗೆ. ಅಜ್ಜನ ಜೊತೆ ಮನೆಯಲ್ಲಿ ಆಟವಾಡಿ ರೂಢಿಯಾಗಿದ್ದ ಅವನು, ಅವರದೇ ವಯಸ್ಸಿನವರಾದ ಶಾಂತಪ್ಪನವರೊಟ್ಟಿಗೆ ಸುಲಭವಾಗಿ ಬೆರೆತು ಆಡುತ್ತಿದ್ದ. ಅವರೂ ಮಗುವಿನೊಟ್ಟಿಗೆ ಮಗುವಿನಂತಾಗಿ ಬಿಡುತ್ತಿದ್ದರು.

ಪ್ರತಿಬಾರಿಯಂತೆ ಈ ಬಾರಿಯೂ ಅಥರ್ವ ಅಪರ್ಣಾಳೊಟ್ಟಿಗೆ ಹೊರಟ. ಪ್ರತಿಬಾರಿಯಂತೆ ಈ ಬಾರಿ ಕಾರ್ ಇರಲಿಲ್ಲ. ಇಬ್ಬರೂ ನಡೆದೇ ಗೇಟ್ ದಾಟಿದರು. ಅಥರ್ವನಿಗೆ ಕುತೂಹಲ ಹೆಚ್ಚಾಗಿ "ಯಾಕಮ್ಮಾ, ಇವತ್ತು ಕಾರ್ ರಿಪೇರಿಗೆ ಹೋಗಿದೆಯಾ? ಆಟೋದಲ್ಲಿ ಮನೆಗೆ ಹೋಗೋದಾ?" ಎಂದದ್ದಕ್ಕೆ ಅವಳಿಗೆ ಏನು ಹೇಳಬೇಕೆಂದು ತೋಚದೆ "ನಿನಗೆ ಐಸ್ಕ್ರೀಂ ಅಂದರೆ ಇಷ್ಟ ಅಲ್ವಾ..? ಅದಕ್ಕೆ ಇಲ್ಲೇ ಹತ್ತಿರದಲ್ಲಿರೋ ಐಸ್ಕ್ರೀಂ ಪಾರ್ಲರ್ ನಲ್ಲಿ ಐಸ್ಕ್ರೀಂ ತಿನ್ನಿಸೋಣ" ಅಂತಾ ಹೇಳಿದಳು. ಖುಷಿಯಿಂದ ಅವಳೊಟ್ಟಿಗೆ ಹೆಜ್ಜೆ ಹಾಕುತ್ತಿದ್ದ ಅಥರ್ವ ಯಾವುದೋ ಮಾಯೆಯಲ್ಲಿ ಅವಳ ಕೈ ಬಿಡಿಸಿಕೊಂಡು ರಸ್ತೆಗಿಳಿದುಬಿಟ್ಟ. ಆಗಲೇ ಅಲ್ಲಿ ಬರುತ್ತಿದ್ದ ಕಾರಿಗೆ ಸಿಲುಕುವವನಿದ್ದ, ಅಷ್ಟರಲ್ಲಿ ಯಾರೋ ಅವನನ್ನು ದೂಡಿ ತಾನು ಕಾರಿಗೆ ಸಿಲುಕಿದ್ದ, ಆ ಪುಟ್ಟ ಹುಡುಗನೊಡನೆ ಮತ್ತೊಬ್ಬ ಹುಡುಗಿಯೂ ಇದ್ದಳು. ಆ ಕಾರು ಮೈನಾವತಿಯವರದ್ದು. ಎಲ್ಲವೂ ಕಣ್ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಡೆದು ಹೋಗಿತ್ತು. 

ಕಾರಿನಿಂದ ಇಳಿದ ಮೈನಾವತಿಯವರು ಅಪರ್ಣಾಳನ್ನು, ಅಥರ್ವನನ್ನು ನೋಡಿ ಗಾಬರಿಯಾದರು. ಅವರನ್ನು ಮತ್ತಷ್ಟು ಗಾಬರಿಗೊಳಪಡಿಸಿದ್ದು ಆ ಮಕ್ಕಳು.
"ಸ್ಕಂದ..... ಸುಕ್ಷಿತ..." ಎಂದು ಕೂಗಿಕೊಂಡವರೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು.

ಅಪರ್ಣಾಳಿಗೆ ಎಲ್ಲವೂ ಅಯೋಮಯ. ಮೈನಾವತಿ ಅಮ್ಮನನ್ನು ಅಲ್ಲಿ ನೋಡಿದವಳಿಗೆ ಆಶ್ಚರ್ಯವಾಗಿತ್ತು. ಆದರೆ, ಅದೆಲ್ಲವನ್ನು ಯೋಚಿಸುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅಥರ್ವನಿಗೆ ತರಚು ಗಾಯಗಳಾಗಿದ್ದವು ಅಷ್ಟೇ.. ಆದರೆ, ಸ್ಕಂದ ರಕ್ತದ ಮಡುವಲ್ಲಿದ್ದ, ಸುಕ್ಷಿತ ಕೂಡಾ ಪ್ರಜ್ಞೆ ತಪ್ಪಿದ್ದಳು. ಯಾರನ್ನು ಸಂಭಾಳಿಸುವುದೋ ತಿಳಿಯದಿರುವಾಗ ಸಂಧರ್ಭವನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದ ನಂದನ್. ತಕ್ಷಣವೇ ಆಸ್ಪತ್ರೆಗೆ ಕರೆ ಮಾಡಿ ambulance ಅನ್ನು ಕರೆಸಿದ್ದ. ಆವರದ್ದೇ ಆಸ್ಪತ್ರೆ "ಕಾರುಣ್ಯ"ದಲ್ಲಿ ಸ್ಕಂದನ ಚಿಕಿತ್ಸೆಗೆ ಎಲ್ಲವೂ ತಯಾರಾಗಿತ್ತು.

ತಕ್ಷಣವೇ ನಂದನ್ ಕರೆಮಾಡಿ ಎಲ್ಲವನ್ನೂ ಅಶುತೋಷ್ ಗೆ ತಿಳಿಸಿದ್ದ.

ಸ್ಕಂದ ಅಲ್ಲಿಗೆ ಯಾಕೆ ಬಂದ? ಹೇಗೆ ಬಂದ? ಅಪರ್ಣಾ ಮೈನಾ ಅಮ್ಮನನ್ನು ನೋಡಿದ್ದಾಳೆ. ಯಾವ ಸತ್ಯವನ್ನು ಅವಳಿಂದ ಇಷ್ಟು ದಿನ ಮುಚ್ಚಿಟ್ಟಿದ್ದೇನೋ ಅದು ತಾನಾಗಿಯೇ ಅವಳ ಮುಂದಿದೆ. ಈಗೇನು ಮಾಡುವುದು ? ತಲೆಬಿಸಿಯಲ್ಲಿದ್ದ ಅಶುತೋಷ್ ನ ಮೊಬೈಲ್ ಮತ್ತೆ ರಿಂಗಣಿಸತೊಡಗಿತು

(ಸಶೇಷ)

(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2020

ಸಿರಿಗೌರಿಯ ಸದಾಶಿವ-೩


 ನಂದನ್ ಡೈರಿಯನ್ನು ಮುಚ್ಚಿಟ್ಟು ನಿರಾಳನಾದ. ಆದರೂ, ಏಕೋ ರೂಮ್ ನ ಒಳಗೆ ಇರಲಾಗದೆ, ರೂಮ್ ಹೊರಗೆ ಅಂಟಿಕೊಂಡಂತಿದ್ದ ಬಾಲ್ಕನಿಗೆ ಬಂದು ನಿಂತ. ಬಾಲ್ಕನಿಯಲ್ಲಿ ಪುಟ್ಟ ಪುಟ್ಟ ಹೂ ಕುಂಡದಲ್ಲಿ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿ ಇದ್ದದ್ದು ಬೆತ್ತದ ತೂಗುಮಂಚ. ಅಪರ್ಣಾಳೆ ಅಲ್ಲಿ ಕುಳಿತಂತೆ ಭಾಸ. ಅಲ್ಲಿ ಕುಳಿತು ಪುಸ್ತಕ ಓದುವುದು ಅವಳ ಮೆಚ್ಚಿನ ಹವ್ಯಾಸದಲ್ಲಿ ಒಂದು. ಅವಳ ಬೇಜಾರನ್ನು ಹೋಗಲಾಡಿಸಿಕೊಳ್ಳುವ ಸ್ಥಳ ಕೂಡಾ ಅದೇ. ಅಲ್ಲಿಯೇ ಕುಳಿತು ಅವಳು ಅವಳ ಡೈರಿ ಬರೆಯುತ್ತಿದ್ದದ್ದು. ಒಂದು ದಿನವೂ ಅಶುತೋಷ್ ಅದನ್ನು ಓದಿರಲಿಲ್ಲ.ಅಷ್ಟಕ್ಕೂ, ಅಶುತೋಷ್ ಗೆ ಡೈರಿ ಬರೆಯುವ ಹವ್ಯಾಸವನ್ನು ರೂಢಿ ಮಾಡಿಸಿದ್ದು ಸಹಾ ಅವಳೇ. ಇಬ್ಬರೂ ಸಹಾ ಒಬ್ಬರ ಬದುಕಲ್ಲಿ ಮತ್ತೊಬ್ಬರು ಮೂಗು ತೂರಿಸುವ ರೂಢಿಯನ್ನಿಟ್ಟುಕೊಂಡಿರಲಿಲ್ಲ.


ಒಬ್ಬರ ಗುಟ್ಟುಗಳು ಮತ್ತೊಬ್ಬರಿಗೆ ಗೊತ್ತಿದ್ದರೂ ಸಹಾ ರಟ್ಟಾಗದಂತೆ ಗೌಪ್ಯ ವಹಿಸುತ್ತಾ ಕಾಪಾಡುವುದು ಡೈರಿ ಮಾತ್ರವೇ. ದಾಂಪತ್ಯದಲ್ಲಿ ಗುಟ್ಟುಗಳೇ ಇರಬಾರದೆನ್ನುತ್ತಾರೆ. ಗುಟ್ಟುಗಳೇ ಇಲ್ಲದ ಬದುಕಲ್ಲಿ ಸ್ವಾರಸ್ಯವಿರಲಾರದು. ದಾಂಪತ್ಯದಲ್ಲಿ ಗುಟ್ಟುಗಳಿದ್ದರೂ, ಅಂತರವಿರಬಾರದು. ಆಂತರ್ಯದ ಅಂತರಗಳು ಅನುರಾಗವನ್ನು ಕೊಲ್ಲುತ್ತವೆ. ಅಪರ್ಣಾ ಕೇಳಬೇಕೆಂದುಕೊಂಡ ಎಷ್ಟೋ ಪ್ರಶ್ನೆಗಳಿಗೆ ಅವಳು ಕೇಳುವ ಮೊದಲೇ ಉತ್ತರಿಸಿದ್ದೇನೆ. ನನ್ನ ಎಷ್ಟೋ ಗೊಂದಲಗಳಿಗೂ ಅವಳು ನನ್ನ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡಂತೆ ಉತ್ತರಿಸಿದ್ದಾಳೆ. ಅನುರೂಪದ ದಾಂಪತ್ಯ ನಮ್ಮದು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಎಲ್ಲಾ ದಾಂಪತ್ಯದಲ್ಲಿಯೂ ಈ ಅನುರಾಗದ ಅಪಸ್ವರ ಮೂಡಿರಬಹುದೇ..? ಎಲ್ಲಾ ಅಪಸ್ವರವನ್ನು ಸುಸ್ವರ ಮಾಡಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು. ಅಲ್ಲವೇ..? ಅಪರ್ಣಾಳನ್ನೇ ನೆನಪಿಸಿಕೊಂಡು ಬೆತ್ತದ ತೂಗುಯ್ಯಾಲೆಯಲ್ಲಿ ಕುಳಿತು ಮನಸ್ಸಿನಲ್ಲೇ ಮಂಥನ ಮಾಡಿಕೊಳ್ಳುತ್ತಿದ್ದ ಅಶುತೋಷ್. ಯಾವುದೋ ಆಲೋಚನೆಯಲ್ಲಿ ಪಕ್ಕದಲ್ಲೇ ಕೈಯಿಟ್ಟರೆ ಐದಾರು ಪುಸ್ತಕಗಳ ರಾಶಿ ಅಲ್ಲಿತ್ತು.

ಆ ಪುಸ್ತಕಗಳ ರಾಶಿಯಲ್ಲೇ ಬೆಚ್ಚಗೆ ಮಲಗಿತ್ತು ಅಪರ್ಣಾಳ ಡೈರಿ. ಒಮ್ಮೆ ಅಶುತೋಷ್ ಮನಸ್ಸಲ್ಲಿ ಸಂತೋಷದ ಅಲೆ ಎದ್ದಿತು. ಆದರೆ, ಮರುಕ್ಷಣವೇ ಮನಸ್ಸಿನಲ್ಲಿ ಗೊಂದಲದ ಭಾವ. ಮತ್ತೊಬ್ಬರ ಡೈರಿಯನ್ನು ಓದುವುದೋ, ಬೇಡವೋ ಎಂಬ ಸಂದಿಗ್ಧತೆ. ತನ್ನ ಕುರಿತು ಅವಳು ಏನು ಬರೆದಿರಬಹುದು ಎಂಬ ಕುತೂಹಲ. ಕುತೂಹಲ ಮತ್ತು ಸಂಧಿಗ್ಧತೆಯ ನಡುವಿನ ಯುದ್ಧದಲ್ಲಿ ಗೆದ್ದದ್ದು ಕುತೂಹಲ. ಮೊದಲ ಪುಟ ತೆರೆದ. ಮುದ್ದಾದ ಬರಹ

"ಬದುಕು ಮತ್ತು ಮನಸ್ಸಿನ ಪರಿಶುದ್ಧತೆ ಪಕ್ವವಾಗಿರುವುದು ಪರಿಸರದಲ್ಲಿ. ಪರಿಸರ ಎಂದರೆ ನನಗೆ ನೆನಪಾಗುವುದು ನನ್ನ "ವಸುಂಧರಾ ಎಸ್ಟೇಟ್". ವಸುಂಧರೆಯ ಮೋಹ ಬಿಡದೆ ಕಾಡುವುದು ಸೀತೆಯನ್ನು ಮಿಥಿಲೆಯ ಮಣ್ಣು ಕಾಡಿದಂತೆ... ಎಷ್ಟಾದರೂ ತವರು ಜಗತ್ತಿನ ಎಲ್ಲಾ ಸ್ಥಳಗಳಿಗಿಂತ ನೆಮ್ಮದಿ ನೀಡುತ್ತದೆ ಹಾಗೂ ಕಾಡುತ್ತದೆ. ಬೆಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳಲು ಆಗುತ್ತದೋ ಇಲ್ಲವೋ ಎಂಬ ಆಲೋಚನೆಯಲ್ಲಿಯೇ ಬಂದವಳನ್ನು ಬೆಂಗಳೂರು ತೆರೆದ ಮನಸ್ಸಿನಿಂದ ಸ್ವಾಗತಿಸಿತು. "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ಗೂ ಅಂತಹಾ ವ್ಯತ್ಯಾಸವೇನೂ ನನಗೆ ಕಾಣಲಿಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ವಸುಂಧರೆ ನಳನಳಿಸುತ್ತಿದ್ದಳು. "ಪ್ರಾಜೆಕ್ಟ್ ಗ್ರೀನ್(Project Green)" ಗಾಗಿ ನಾನು ಹಾಸನದ ಬ್ರಾಂಚ್ ನಿಂದ ಇಲ್ಲಿಗೆ ವರ್ಗಾಯಿಸಲ್ಪಟ್ಟಿದ್ದೆ. "ಪ್ರಾಜೆಕ್ಟ್ ಗ್ರೀನ್" ನನ್ನ ಕನಸಿನ ಕೂಸು. ಅದರ ಸಾಕಾರಕ್ಕೆ ಇದೇ ಸರಿಯಾದ ಸ್ಥಳ ಎಂದು ನಿರ್ಧರಿಸಿಬಿಟ್ಟೆ. ಅಲ್ಲಿ ಬಂದ ಮೊದಲ ದಿನ ನನಗೆ ಪರಿಚಯವಾದದ್ದು "ಕಾತ್ಯಾಯಿನಿ".

ಕಾತ್ಯಾಯಿನಿಯ ಹೆಸರನ್ನು ನೋಡಿದ ಮರುಕ್ಷಣವೇ ಅಶುತೋಷ್ ಗೆ ಮರೆತಂತಿದ್ದದ್ದೆಲ್ಲಾ ನೆನೆಪಾಯಿತು. ಸುಮ್ಮನೆ ಡೈರಿ ಮುಚ್ಚಿಟ್ಟು ಕುಳಿತ. ನಭದ ನಕ್ಷತ್ರವಾಗಿದ್ದ ಕಾತ್ಯಾಯಿನಿಯನ್ನು ಒಮ್ಮೆ ನಿಟ್ಟುಸಿರಿಟ್ಟು ನೆನೆದು ಆಗಸದತ್ತ ನೋಡಿದ. ಗಟ್ಟಿಯಾಗಿ ಒಮ್ಮೆ ಕಿರುಚಬೇಕೆನಿಸಿತ್ತು "ಕಾತ್ಯಾಯಿನಿ...." ಎಂದು. ಮನಸ್ಸಿನಲ್ಲಿ ಮತ್ತೆ ಮತ್ತೆ ಅವಳ ಹೆಸರನ್ನು ಕನವರಿಸಿದ. ಆಗಸದಲ್ಲಿನ ತಾರೆಯೊಂದು ಅವನ ಮನಸ್ಸಿನ ಕೂಗಿಗೆ ಸ್ಪಂದಿಸಿತೇನೋ ಎಂಬಂತೆ ಮಿನುಗಿತು. ಆಗ ಅಂದಿನ ತಾರೀಖನ್ನು ತಟ್ಟನೆ ನೆನಪಿಸಿಕೊಂಡ. "ಅಯ್ಯೋ, ಇಂದಿನ ದಿನವನ್ನು ನಾನು ಮರೆತದ್ದಾದರೂ ಹೇಗೆ..? ಅವಳು ನಮ್ಮನ್ನೆಲ್ಲಾ ಆಗಲಿ ಇಂದಿಗೆ ಐದು ವರ್ಷ. ಅಲ್ಲವೇ.. ?" ಎಂದು ಅವನ ಮೊಬೈಲ್ ಅನ್ನು ಹುಡುಕುತ್ತಾ ಒಳ ಬಂದ.

ಯಾಕೋ ಮನಸ್ಸಿನ್ನಲ್ಲಿ ದುಗುಡವನ್ನೆಲ್ಲಾ ಹೊತ್ತು ಒಳ ಬಂದವನಿಗೆ ಕಂಡದ್ದು ಗೋಡೆಯ ಮೇಲೆ ತೂಗು ಹಾಕಿದ್ದ "ಕಾತ್ಯಾಯಿನಿ"ಯ ದೊಡ್ಡ ಭಾವಚಿತ್ರ. ಅಪರ್ಣಾ ಹೋಗುವ ಮುನ್ನ ಹೊಸದೊಂದು ಹೂ ತಂದಿಟ್ಟಿದ್ದಳು. ಅಪರ್ಣಾ ಹಾಗೆಯೇ ಅಲ್ಲವೇ..? ಎಂತದ್ದೇ ಕೋಪವಿದ್ದರೂ, ಮುನಿಸಿದ್ದರೂ ತನ್ನ ಕೆಲಸವನ್ನು ಮರೆಯಲಾರಳು. ಯಾಕೋ ಕಾತ್ಯಾಯಿನಿ ಅಣಕಿಸಿ ನಕ್ಕಂತಾಯಿತು.

ಅವಳ ಭಾವಚಿತ್ರದ ಪಕ್ಕದಲ್ಲಿದ್ದ ಸಾಲುಗಳನ್ನೊಮ್ಮೆ ಓದಿದ. 
ದೇಹ ಮರೆಯಾಗಿರಬಹುದು
ಚೇತನವಿನ್ನೂ ಹಾಗೇ ಉಳಿದಿದೆ
ಭಾವಗಳ ಉಸಿರು ಅಲೆಅಲೆಯಾಗಿ
ಎದೆಯಂಗಳದ ಒಲವ ಸೇರಿದೆ
ಒಲವ ಲಾಲಿಯ ಹಾಡುತ್ತಲೇ ಇರುವೆ
ನಿನ್ನ ಎದೆಯ ಮಾತನ್ನೊಮ್ಮೆ ಆಲಿಸು
ಕಣ್ಮುಚ್ಚಿ ಮಲಗಿರಬಹುದು
ಭೂ ತಾಯಿಯ ಮಡಿಲಲ್ಲಿ
ಪ್ರತಿ ಕ್ಷಣವೂ ಜೀವದಂತಿರುವೆ
ನಿನ್ನೆದೆಯ ಒಲವಲ್ಲಿ, ಭಾವದೋಕುಳಿಯಲ್ಲಿ

ಅಪರ್ಣಾಳೇ ಬರೆದು, ಕಾತ್ಯಾಯಿನಿಯ ಭಾವಚಿತ್ರದ ಜೊತೆ ಅಚ್ಚು ಮಾಡಿಸಿದ್ದ ಸಾಲುಗಳು. ಒಬ್ಬಳು ಜೀವಂತ ಸ್ಫೂರ್ತಿ, ಮತ್ತೊಬ್ಬಳು ಒಲುಮೆಯ ಚಿಲುಮೆ. 

ಮೊಬೈಲ್ ಸದ್ದಾದಂತಾಗಿ ನೋಡಿದರೆ, 20 ಮಿಸ್ ಕಾಲ್ ಗಳಿದ್ದವು. ಮೈನಾ ಅಮ್ಮನ ಕಾಲ್ ಗಳು 19. ಮತ್ತೊಂದು ನಂದನ್ ನದ್ದು. ಮೊದಲು ಯಾರಿಗೆ ಮಾಡಲಿ ಎಂದು ಆಲೋಚಿಸುತ್ತಿರುವಾಗಲೇ ಕಾತ್ಯಾಯಿನಿಯ ನೆನಪಾಗಿ ಮೈನಾ ಅಮ್ಮನ ಮೊಬೈಲ್ಗೆ ಕರೆ ಮಾಡಲು ನಿರ್ಧರಿಸಿ ಮೈನಾವತಿಯ ಮೊಬೈಲ್ ಗೆ ಕರೆ ಮಾಡಿದ. ಐದಾರು ಬಾರಿ ರಿಂಗಣಿಸಿದರೂ ಕರೆ ಸ್ವೀಕರಿಸದಿದ್ದಕ್ಕೆ ಲ್ಯಾಂಡ್ ಲೈನ್ ಗೆ ಕರೆ ಮಾಡಿದ. ಕರೆ ಸ್ವೀಕರಿಸಿದ್ದು ಕುಡಿದ ಮತ್ತಿನಲ್ಲಿದ್ದ "ವಿರಾಜ್". ಧ್ವನಿ ಕೇಳಿಯೇ ಅಶುತೋಷ್ ಗೆ ಮೈಯೆಲ್ಲಾ ನಖಶಿಕಾಂತ ಉರಿದಂತಾಯಿತು. ಕರೆ ತುಂಡರಿಸಿದವನಿಗೆ ನೆನಪಾದದ್ದು ಅದೇ ಮನೆಯಲ್ಲಿ ವಾಚ್ ಮ್ಯಾನ್ ಆಗಿದ್ದ "ಸುಂದ್ರಪ್ಪ". ತಕ್ಷಣವೇ ಡಯಲ್ ಮಾಡಿದ. ಸುಂದ್ರಪ್ಪ ಹೇಳಿದ ಮಾತು ಕೇಳಿ ಅಶುತೋಷ್ ಗೆ ಗಾಬರಿಯಾಯಿತು. "ಅಮ್ಮಾವ್ರು ನಿಮ್ಮ ಮನೆಗೇ ಹೋಗುತ್ತೇನೆ ಎಂದು ಹೊರಟು ಒಂದು ಗಂಟೆಯಾಯಿತು. ಇನ್ನೂ ಬಂದಿಲ್ಲವಾ..? ಇನ್ನೇನು ಬರಬಹುದು" ಎಂದೇಳಿ ಕರೆ ತುಂಡರಿಸಿದ. 


ಇತ್ತ ನಂದನ್ ನ ಕರೆ ಸತತವಾಗಿ ಬರುತ್ತಲೇ ಇತ್ತು. ತಕ್ಷಣವೇ ಸ್ವೀಕರಿಸಿದ. "ಹಲೋ ಅಶು, ಇಲ್ಲಿ accident.." ಎಂದು ಮಾತನಾಡುತ್ತಿರುವಾಗಲೇ ಕಾಲ್ ಕಟ್ ಆಗಿತ್ತು. ಅಶುತೋಷ್ ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೊರಟ. ಅಪರ್ಣಾಳ ಮೇಲೆ ಅವನು ಎಷ್ಟು ಅವಲಂಬಿತನಾಗಿದ್ದ ಎಂದು ಅವನಿಗೆ ಅರಿವಾಗುತ್ತಲಿತ್ತು. ಅವಳಿದ್ದಾಗ ಮೊಬೈಲ್ ಚಾರ್ಜ್ ಹಾಕಲು ಕೂಡಾ ಅವಳೇ ನೆನಪಿಸುತ್ತಿದ್ದಳು. ಆದರೆ, ಈಗ...?

ಅಪ್ಪ, ಅಮ್ಮ ಮನೆಗೆ ಬಂದಿಲ್ಲ, ಅಪರ್ಣಾ, ಅಥರ್ವನಿಗೇನಾದರೂ ಆಯಿತೇ..? ಮೈನಾ ಅಮ್ಮ ಕೂಡಾ ಇನ್ನೂ ತಲುಪಿಲ್ಲ. ವಾಸ್ತವದ ಬಿಸಿ, ಕೆಟ್ಟ ಆಲೋಚನೆಗಳ ಮಧ್ಯೆ ಬಂಧಿಯಾಗಿದ್ದ ಅಶುತೋಷ್

*********

ಇತ್ತ ಮನೆಗೆ ಬಂದಾಗಲೇ ಹೊರ ಹೊರಟಿದ್ದ ಮೈನಾವತಿ, ಅಪರ್ಣಾಳ ಆಳೆತ್ತರದ ಫೋಟೋ, ಕೆಲಸದವರ ಅಸಡ್ಡೆ ಎಲ್ಲವೂ ವಿರಾಜ್ ನ ಕೋಪವನ್ನು ತಾರಕಕ್ಕೇರಿಸಿತ್ತು. ಮೊದಲೇ ಕುಡಿದಿದ್ದ, ಈಗ ಮತ್ತಷ್ಟು ವ್ಯಗ್ರನಾಗಿ ಕುಡಿಯಲು ಕುಳಿತಿದ್ದ. ಬಂದ ಫೋನ್ ಕಾಲ್ ನಲ್ಲಿಯೂ ಯಾರೂ ಮಾತನಾಡದಿರುವುದು ಮತ್ತಷ್ಟು ಸಿಟ್ಟು ತರಿಸಿ ರಂಪ ಮಾಡಲು ಆರಂಭಿಸಿದ್ದ. 

ಆಗಲೇ, ಅವನ ಮೊಬೈಲ್ ಗೆ ಬಂದ ಕರೆಯನ್ನು ಸ್ವೀಕರಿಸಿದವನಿಗೆ ಹೇಳಿದ ವಿಷಯ ಕೇಳಿ ಕುಡಿದ ಮತ್ತೆಲ್ಲಾ ಒಮ್ಮೆಲೇ ಇಳಿದಿತ್ತು.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿ.ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ)


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 16, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೨)

 


ಬಂದ ಕರೆಯನ್ನು ಸ್ವೀಕರಿಸುವ ಮನಸ್ಸಿಲ್ಲದಿದ್ದರೂ ಸ್ವೀಕರಿಸಲೇಬೇಕಿತ್ತು. ಇದು ಅಪರ್ಣಾಳಿಂದ ಕಲಿತ ಪಾಠ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಚರ್ಯೆಗೂ ಕೆಲಸದ ಸಮಯವೆಂದೇ ಮೀಸಲಾಗಿ ಇಡಲಾಗದು. ಹಾಗೆಂದು, ನಮ್ಮ ವೈಯಕ್ತಿಕ ಬದುಕನ್ನು ಬಿಟ್ಟು ಕೆಲಸವೇ ಮುಖ್ಯ ಎಂದು ಕುಳಿತುಕೊಳ್ಳಲು ಸಹಾ ಆಗದು. ವೈಯಕ್ತಿಕ ಬದುಕು ಮತ್ತು ಕೆಲಸ ಎರಡನ್ನೂ ಸಮತೋಲನಗೊಳಿಸಲು ಕಲಿಯಬೇಕು. ಆಗಷ್ಟೇ, ಯಾವುದೂ ಹೊರೆ ಎನಿಸದು. ಅಕಸ್ಮಾತ್, ಆ ಕ್ಷಣಕ್ಕೆ ನಮಗೆ ಆ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಕರೆ ಸ್ವೀಕರಿಸಿ ಹೇಳಿದರೆ ಮತ್ತೊಬ್ಬರಿಗೂ ಅದರಿಂದ ತೊಂದರೆಯಾಗದು. ಇಲ್ಲವಾದಲ್ಲಿ ನಮ್ಮ ತೀರ್ಮಾನವನ್ನು ಕಾಯುತ್ತಾ ಕುಳಿತೋ ಅಥವಾ ಅವರದ್ದೇ ಸ್ವಂತ ನಿರ್ಧಾರವನ್ನು ತೆಗೆದುಕೊಂಡೋ ಕೆಲಸವನ್ನು ಎಡವಟ್ಟು ಮಾಡಿ ಬಿಡಬಹುದು.


ಒಂದೊಂದು ಕೆಲಸದ ಹಿಂದೆಯೂ ಅಶುತೋಷ್ ಗೆ ಅಪರ್ಣಾ ನೆನಪಾಗುತ್ತಿದ್ದಳು. ಕರೆ ಸ್ವೀಕರಿಸಿದ ಅಶುತೋಷ್. "ಸರ್, ಅಪರ್ಣಾ ಮೇಡಂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿಮಗಾಗಿ ಕಾಯುತ್ತಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಏನು ಮಾಡುವುದು?" ಕೇಳಿದರು ನಂದನ್. 

ನಂದನ್ ವರ್ಮಾ "ಕರ್ಮಭೂಮಿ ಪ್ರೈವೇಟ್ ಲಿಮಿಟೆಡ್" ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್. ಅಶುತೋಷ್ ಮುಖರ್ಜಿಯ ನಂತರದ ಸ್ಥಾನದಲ್ಲಿದ್ದದ್ದು ನಂದನ್ ವರ್ಮಾ. ನಂದನ್ ಬರೀ ಕಂಪನಿಯಲ್ಲಿ ಮಾತ್ರವಲ್ಲ ಅಶುತೋಷ್ ನ ಬದುಕಿನ ಬಹು ಮುಖ್ಯ ಸ್ನೇಹಿತ. ಅಪರ್ಣಾ ಅಶುತೋಷ್ ನ ಬದುಕಿನಲ್ಲಿ ಬಂದಾಗ ಎಲ್ಲರಿಗಿಂತ ಹೆಚ್ಚು ಸಂತಸಪಟ್ಟದ್ದು ನಂದನ್. 

"ನಂದಿ, ನನ್ನ ಮೇಲೆ ಕೋಪ ಬಂದಿರುವ ಹಾಗಿದೆ ನಿನಗೆ" ಎಂದು ಕೇಳಿದ ಅಶುತೋಷ್. "ಅಯ್ಯೋ ಸರ್, ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲು ನಾನು ಯಾರು? ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಒಬ್ಬ ಸಾಮಾನ್ಯ ನೌಕರ ನಾನು. ಅದನ್ನೆಲ್ಲಾ ಬಿಡಿ ಸರ್. ಈಗ, ರಾಜೀನಾಮೆ ಪತ್ರವನ್ನು ಏನು ಮಾಡುವುದು ಹೇಳಿ" ಎಂದನು ನಂದನ್. "ಎಲ್ಲರೂ ಯಾಕೆ ಹೀಗೆ ಮಾತಲ್ಲೇ ನನ್ನನ್ನು ಕೊಲ್ಲುತ್ತಿದ್ದೀರಾ? ಇದಕ್ಕಿಂತ ಒಮ್ಮೆಲೆ ನಮ್ಮನ್ನು ಕೊಂದುಬಿಡಿ. ಅದೇ ಕ್ಷೇಮ" ಎಂದನು ಅಶುತೋಷ್. ನಂದನ್ ಅಶುತೋಷ್ ಮಾತಿಗೆ ಬೇಸರ ಪಟ್ಟುಕೊಂಡರೂ ತೋರ್ಪಡಿಸಿಕೊಳ್ಳದೆ, "ಸರ್,  ಆ ವಿಚಾರವಾಗಿ ಆಮೇಲೆ ಚರ್ಚೆ ಮಾಡಬಹುದು. ಹೆಣ್ಣು ಮಕ್ಕಳನ್ನು ಹೆಚ್ಚು ಹೊತ್ತು ಕಾಯಿಸುವುದು ಸರಿ ಇರುವುದಿಲ್ಲ. ಈಗ ನಾನು ಅವರಿಗೆ ಏನೆಂದು ಉತ್ತರಿಸಲಿ ? ಅದನ್ನು ಹೇಳಿ" ಎಂದನು ನಂದನ್.

ಕ್ಷಣ ಕಾಲ ಯೋಚಿಸಿದ ಅಶುತೋಷ್ " ಅವರ ರಾಜೀನಾಮೆಯನ್ನು ಸ್ವೀಕರಿಸಬೇಕಾದವನು ನಾನು ಮಾತ್ರ. ಅವರು ಕೆಲಸಕ್ಕೆ ಸೇರುವಾಗ ಬರೆದುಕೊಟ್ಟಿರುವ ಪತ್ರದಲ್ಲಿ ಸಹಾ ಹಾಗೆಯೇ ನಮೂದಿಸಲಾಗಿದೆ. ಅವರಿಗೆ ತಿಳಿಸಿ ನಾಳೆ ನಾನು ಬಂದಾಗ ನನ್ನ ಬಳಿಯೇ ಬಂದು ಅವರ ರಾಜೀನಾಮೆಯನ್ನು ಸಲ್ಲಿಸಲು. ಹಾಗೆಯೇ, ಮತ್ತೊಂದು ವಿಷಯವನ್ನು ಸಹಾ ಸ್ಪಷ್ಟ ಪಡಿಸಿಬಿಡಿ ಅವರ ನೋಟಿಸ್ ಪಿರಿಯೆಡ್ ಮೂರು ತಿಂಗಳ ಕಾಲ. ಅದೂ ಸಹಾ ಆ ಪತ್ರದಲ್ಲಿಯೇ ಸ್ಪಷ್ಟವಾಗಿ ನಮೂದಾಗಿದೆ. ಆವರು ಕೆಲಸವನ್ನು ಸ್ವ ಇಚ್ಛೆಯಿಂದ ಬಿಡುವ ಹಾಗಿದ್ದರೆ ಮೂರು ತಿಂಗಳ ಮೊದಲೇ ತಿಳಿಸಿ ತಮ್ಮ ಎಲ್ಲಾ ಕೆಲಸವನ್ನೂ ಆ ಸಮಯದಲ್ಲಿ ಪೂರೈಸಬೇಕು. ಅದು, ಸಾಧ್ಯವಾಗದಿದ್ದಲ್ಲಿ 25 ಲಕ್ಷ ಹಣವನ್ನು ಪಾವತಿಸಿ ಆ ಕ್ಷಣವೇ ಕೆಲಸವನ್ನು ಬಿಡಬಹುದು." ಅಶುತೋಷ್ ನ ಮನದಲ್ಲಿ ಸ್ಪಷ್ಟ ತೀರ್ಮಾನವೊಂದು ರೂಪುಗೊಂಡಿತ್ತು. 


ನಂದನ್ ಗೆ ಅಶುತೋಷ್ ನ ನಿರ್ಧಾರ ಕೇಳಿ ಅವನ ಉಪಾಯದ ಸುಳಿವು ಹತ್ತಿತ್ತು. ಮುಖದಲ್ಲಿ ಕಿರುನಗೆಯೊಂದು ಮೂಡಿ ನೆಮ್ಮದಿಯ ಭಾವ ನೆಲೆಸಿತು. "ಹಾಗೇ ಹೇಳುವೆ ಸರ್, ನನ್ನ ಕೆಲಸವನ್ನೆಲ್ಲಾ ಮುಗಿಸಿ ನಂತರ ಕರೆ ಮಾಡುವೆ ಸರ್" ಎಂದ. "ಈಡಿಯೆಟ್, ಇನ್ನೂ ಕೋಪ ಹೋಗಿಲ್ವಾ? ಸರ್ ಅಂತಾನೇ ಕರೆಯುತ್ತಿದ್ದೀಯಲ್ಲಾ?" ಎಂಬ ಪ್ರಶ್ನೆಗೆ "ಅಪರ್ಣಾ ಮೇಡಂ ಇಲ್ಲೇ ಕುಳಿತ್ತಿದ್ದಾರೆ ಸರ್, ಅವರನ್ನು ಹೆಚ್ಚು ಕಾಯಿಸುವುದಿಲ್ಲ. ನೀವು ಹೇಳಿದ ಹಾಗೆಯೇ ಮಾಡುವೆ " ಎಂದು ಗಂಭೀರವಾಗಿ ಮಾತನಾಡುತ್ತಿದ್ದ ನಂದನ್ ನನ್ನು ನೋಡಿದ ಅಪರ್ಣಾ ನಿಟ್ಟುಸಿರಿಟ್ಟಳು.

"ಅಶು, ನಿನಗಾಗಿ ನಾನು ಬಹಳಷ್ಟು ಬದಲಾದೆ. ಆದರೆ, ನೀನು..? ಬದಲಾಗಿದ್ದೆ ಎಂದುಕೊಂದಿದ್ದೆ. ಇಲ್ಲ, ನಿನ್ನ ಬದುಕಿನಲ್ಲಿ ನಾನಿಲ್ಲ. ನಿನ್ನ ಬದುಕಿನ ಒಂದು ಭಾಗವಷ್ಟೇ ನಾನು. ನಾನಿಲ್ಲದೆಯೂ ನೀನು ಬದುಕಬಲ್ಲೆ. ಇಲ್ಲವಾದಲ್ಲಿ ನನ್ನನ್ನು ಇಷ್ಟು ಸುಲಭವಾಗಿ ಹೋಗಲು ಬಿಡುತ್ತಿದ್ದೆಯಾ ? ಹಿಮದಬಂಡೆ ಕರಗಿ ನೀರಾದರೆ ಕಲ್ಲು ಕರಗಿತು ಎಂಬ ಭ್ರಮೆಗೆ ಬಿದ್ದು ಬಿಡುತ್ತೇವೆ. ಆದರೆ, ವಾಸ್ತವವಾಗಿ ಕೂಡಾ ಯೋಚಿಸಬೇಕಲ್ಲವೇ..? ಕರಗಿದ ನೀರಿನ ಪ್ರತಿ ಬಿಂದುವು ಸಹಾ ಮತ್ತೆ ಹಿಮದ ಗಡ್ಡೆಯಾಗಿ ಮತ್ತಷ್ಟು ಕಾಠಿಣ್ಯವನ್ನೇ ನೆನಪಿಸುತ್ತದೆ. ಬದುಕಿನ ಯಾವುದಾದರೂ ಭಾಗಕ್ಕೆ ಹಾನಿಯಾದರೆ ಅದನ್ನು ಕತ್ತರಿಸಿ ಎಸೆದು ಬಿಡುತ್ತಾರೆ. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಭಾಗವನ್ನು ಜೋಡಿಸುತ್ತಾರೆ. ಆದರೆ, ಉಸಿರಿಗೆ ಧಕ್ಕೆಯಾದರೆ..? ನನ್ನ ಉಸಿರು ನೀನು. ನಿನ್ನ ಸಂತೋಷ ನೆಮ್ಮದಿಗೆ ನಾನು ಏನನ್ನಾದರೂ ಮಾಡಬಲ್ಲೆ. ಈಗ ನನ್ನೊಡನೆ ಅಥರ್ವ ಇದ್ದಾನೆ. ಹೆರಲಿಲ್ಲ, ಹೊರಲಿಲ್ಲ ಆದರೂ ಅವನು ನನ್ನ ಮಗ, ನಾನು ಅವನಮ್ಮ. ಈ ಸತ್ಯ ಎಂದಿಗೂ ಬದಲಾಗದು. ಅವನಲ್ಲಿಯೇ ನಿನ್ನನ್ನು ಕಾಣುವೆ. ಅವನು ನಿನ್ನ ಮಗನೂ ಅಲ್ಲ, ಅವನು ನಿನ್ನ ಮಗನಾಗಿದ್ದರೆ ಇಷ್ಟು ಸುಲಭವಾಗಿ ನೀನು ಅವನನ್ನು ಬಿಟ್ಟು ಬಿಡುತ್ತಿದ್ದೆಯಾ ?" ಅಪರ್ಣಾಳ ಮನಸ್ಸಿನಲ್ಲಿ ಎಷ್ಟೋ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ, ಅವಳ ಎಷ್ಟೋ ತಿಳುವಳಿಕೆಗಳು ತಪ್ಪಾಗಿದ್ದವು. ಕೆಲವೊಮ್ಮೆ ನಾವು ನಮ್ಮದೇ ಮೂಗಿನ ನೇರಕ್ಕೆ ಯೋಚಿಸುತ್ತೇವೆ. ಮತ್ತೊಬ್ಬರ ಸ್ಥಾನದಲ್ಲಿ ನಿಂತು ಒಂದು ಕ್ಷಣ ಯೋಚಿಸಿದ್ದರೂ ಎಷ್ಟೋ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ. ಅಪರ್ಣಾಳ ಯೋಚನೆಯ ತಂತುವನ್ನು ಕಡಿದ್ದದ್ದು ನಂದನ್ ನ ಧ್ವನಿ.

"ಮೇಡಂ, ದಯವಿಟ್ಟು ಕ್ಷಮಿಸಿ. ಈ ರಾಜೀನಾಮೆ ಪತ್ರವನ್ನು ಸ್ವೀಕರಿಸುವ ಅಧಿಕಾರ ನನಗಿಲ್ಲ. ಅಶುತೋಷ್ ಸರ್ ಅಥವಾ ಮಹಾಂತೇಶ್ ಸರ್ ಗೆ ಮಾತ್ರ ಈ ಅಧಿಕಾರ ಇರುವುದು. ನಾಳೆ ಆಫೀಸ್ ಸಮಯದಲ್ಲಿ ಬಂದರೆ ಯಾರಾದರೂ ಒಬ್ಬರಿಗೆ ನಿಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು. ಈ ನಿಯಮಗಳು ನೀವು ಕೆಲಸಕ್ಕೆ ಸೇರಿದಾಗಿನ ಕರಾರು ಪತ್ರದಲ್ಲಿ ನಮುದಾಗಿವೆ" ಎಂದು ಹೇಳಿದ. ಬೇಕೆಂದೇ ನೋಟಿಸ್ ಪಿರಿಯೆಡ್ ವಿಚಾರವನ್ನು ತಿಳಿಸಲಿಲ್ಲ. ಅಪರ್ಣಾಳಿಗೆ ಮಿಶ್ರ ಭಾವ. "ಸರಿ ಸರ್, ಹಾಗಾದರೆ ನಾಳೆ ಬಂದು ಭೇಟಿಯಾಗುವೆ" ಎಂದು ಹೊರಟಳು. ನಂದನ್ ಗೆ ಅವಳ ಗಾಂಭೀರ್ಯ ಎಂದರೆ ಗೌರವ. ವೈಯಕ್ತಿಕ ವಿಚಾರವನ್ನು ಕೇಳುವ ಧೈರ್ಯವಾಗಲಿಲ್ಲ. "ಮೇಡಂ, ಮನೆಗೆ ಹೋಗುವ ವ್ಯವಸ್ಥೆ ಮಾಡಿಸಲೇ..? ಈಗಾಗಲೇ ಕತ್ತಲಾಗಿದೆ" ಎಂದು ಕೇಳಿದ್ದಕ್ಕೆ "ಬದುಕೇ ಕತ್ತಲಲ್ಲಿದ್ದೆ. ಅದರ ಎದುರು ಇದು ಏನೇನೂ ಅಲ್ಲ. ನಿಮ್ಮ ಕಾಳಜಿಗೆ ಥ್ಯಾಂಕ್ಯೂ ಸರ್" ಎಂದು ಹೇಳಿ ಅಲ್ಲಿಂದ ಹೊರಹೋದಳು ಅಪರ್ಣಾ.

ನಂದನ್ ನ ಕರೆ ಬಂದ ನಂತರ ಕೊಂಚ ನಿರಾಳನಾಗಿದ್ದ ಅಶುತೋಷ್. ಮತ್ತೆ ಡೈರಿಯನ್ನು ಬರೆಯಲು ಮುಂದುವರಿಸಿದ.
"ಮರಳಿ ಬಂದುಬಿಡೆ ನನ್ನ ಸಿರಿಗೌರಿ
ಎನ್ನ ಎದೆಯಂಗಳದ ದೇವಿ ನೀನು
ಮೌನದ ಕಿಡಿ ಹೊತ್ತಿಸದೆ
ಮಾತಿನ ಸಿಡಿಗುಂಡ ಸಿಡಿಸದೆ
ನನ್ನ ಅರ್ಧವನ್ನೇ ನೀಡಿಬಿಡುವೆ"
ಡೈರಿಯಲ್ಲಿ ಈ ಸಾಲುಗಳನ್ನು ಬರೆದು ಮುಚ್ಚಿಟ್ಟು ಬಿಟ್ಟ. ಕನಸಿನಂಗಳಕ್ಕೆ ಜಾರಿಹೋದ. ಮುಂಬರುವ ಅಪಾಯದ ಸೂಚನೆ ಅವನಿಗೆ ಕೊಂಚವಾದರೂ ಇದ್ದಿದ್ದರೆ ಅವನು ನೆಮ್ಮದಿಯಿಂದಿರಲು ಸಾಧ್ಯವೇ ಇರುತ್ತಿರಲಿಲ್ಲ

****************

"ವಸುಂಧರಾ ನಿವಾಸದಲ್ಲಿ" ಮೈನಾವತಿ ಶತಪಥ ಹೆಜ್ಜೆ ಹಾಕುತ್ತಾ ತಿರುಗುತ್ತಿದ್ದರು. ಯಾಕೋ ಎದೆಯಲ್ಲಿ ಹೇಳಲಾರದ ತಳಮಳ. ನಾಳೆಗೆ ಅವಳು ನನ್ನಿಂದ ದೂರವಾಗಿ ಐದು ವರ್ಷ. ಯಾಕೋ ಆ ದಿನ ತಳಮಳವಾಗುತ್ತಿದ್ದಂತೆ ಈ ದಿನವೂ ನನ್ನೆದೆಯಲ್ಲಿ ತಳಮಳ. ಅವನೊಡನೆ ಮಾತನಾಡಿದರೆ ಕೊಂಚವಾದರೂ ನನ್ನ ತಳಮಳ ಕಡಿಮೆಯಾಗಬಹುದು ಎಂದು ಅವನಿಗೆ ಕರೆ ಮಾಡಿದರು. ಫೋನ್ ನ ಪ್ರತಿಯೊಂದು ರಿಂಗ್ ಗೂ ತಳಮಳ ಹೆಚ್ಚಾಗುತ್ತಿತ್ತು. ಸೆಕೆಂಡ್ ಗಳು   ಗಂಟೆಗಳಂತೆ ಭಾಸವಾಗತೊಡಗಿದವು.

(ಸಶೇಷ)

(ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2020

ಸಿರಿಗೌರಿಯ ಸದಾಶಿವ (ಅಧ್ಯಾಯ-೧)

"ಒಲುಮೆಯನ್ನು ಬೆಳೆಸುವುದರಲ್ಲಿ ಅಥವಾ ಕತ್ತರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವುದು ಮೌನ. ಮಾತು ಆಡಿ ಮನಸ್ಸನ್ನು ಛಿದ್ರ-ಛಿದ್ರ ಮಾಡಿದರೆ, ಮೌನ ಏನನ್ನೂ ಮಾಡದೆ ಮನಷ್ಯನ ಮನಸ್ಸನ್ನೇ ಕೊಂದು ಬಿಡುತ್ತದೆ. ನನ್ನ ಮೇಲೆ ನಿಮಗೆ ಯಾಕೆ ಈ ಉಪೇಕ್ಷೆ ? ನಿಮ್ಮ ಸಿಟ್ಟಿನಿಂದ ಮನಸ್ಸು ಘಾಸಿಯಾಗಿಲ್ಲ, ನಿರ್ಲಕ್ಷ್ಯ, ಮೌನ ನನ್ನನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ. ಒಮ್ಮೆಯಾದರೂ ನನ್ನ ಈ ಒಂದು ಪ್ರಶ್ನೆಗೆ ಉತ್ತರ ನೀಡಿ. "
ಅಶುತೋಷ್ ನನ್ನು ಎಲ್ಲಾ ರೀತಿಯಲ್ಲಿಯೂ ಕಾಡಿ ಬೇಡಿದರೂ ಅವನು ಅಪರ್ಣಾಳ ಆ ಒಂದು ಪ್ರಶ್ನೆಗೆ ಉತ್ತರ ನೀಡಲೊಲ್ಲ.

"ನನ್ನನ್ನು ನೋಯಿಸುವುದೇ ನಿಮ್ಮ ಉದ್ದೇಶವೇ ? ನನ್ನ ಬದುಕನ್ನೇ ನಿಮಗಾಗಿ ಮೀಸಲಿಟ್ಟಿದ್ದೇನೆ. ನನ್ನ ಮೇಲೆ ಇನ್ನೂ ಕರುಣೆ ಬಾರದೇ..?  ನಿಮ್ಮ ಉದ್ದೇಶ ಏನು ಎಂಬುದನ್ನು ಬಾಯಿ ಬಿಟ್ಟು ತಿಳಿಸಿಬಿಡಿ. ಆಗಲಾದರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಸಿದರೆಯಾದರೂ ಮುಂದೆ ಎಂದೂ ನಿಮ್ಮನ್ನು ಪ್ರಶ್ನಿಸಲಾರೆ. ನನ್ನ ಎಷ್ಟೋ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ, ಈ ಪ್ರಶ್ನೆಯೂ ಅದೇ ಪಟ್ಟಿಗೆ ಸೇರಿ ಬಿಡಲಿ." 
ಅಪರ್ಣಾಳ ಪ್ರತಿ ಮಾತೂ ಸಿಡಿಗುಂಡಿನಂತೆ ಅವನ ಎದೆ ಸೀಳುತ್ತಿದ್ದರೂ ಅವನು ಅವನ ನಿರ್ಧಾರದಲ್ಲಿ ಅಚಲ. ಕಲ್ಲು ಕೂಡಾ ಕರಾಗಿಬಿಡುತ್ತಿತ್ತೇನೋ ಅಪರ್ಣಾಳ ಕಣ್ಣೀರಿಗೆ, ಅವಳ ಮನದ ನೋವಿಗೆ.. ಆದರೆ, ಹಿಮದ ಬಂಡೆಯಂತೆ ತಣ್ಣಗೆ ನಿಂತಿದ್ದ ಅಶುತೋಷ್ ಮುಖರ್ಜಿ. 

ಆಚಲತೆ ಮುಖದಲ್ಲಿ ಮನೆ ಮಾಡಿತ್ತು, ಕರಗದಂತಹಾ ಕಲ್ಲೆದೆಯ ಹಿಂದೆ ಮನಸ್ಸು ಮಮ್ಮಲ ಮರುಗುತ್ತಿತ್ತು, "ಇದೊಂದು ವಾರ ಸುಮ್ಮನಿದ್ದರೆ ಎಲ್ಲವನ್ನೂ ಸರಿ ಮಾಡಿಬಿಡುವೆ, ಕ್ಷಮಿಸಿಬಿಡು ಅಪ್ಪು" ಎಂದು ಮನಸ್ಸಿನಲ್ಲಿಯೇ ಅವಳ ಕ್ಷಮೆ ಕೇಳಿ ತಿರುಗಿಯೂ ನೋಡದಂತೆ ಮನೆಯಿಂದ ಹೊರ ನಡೆದುಬಿಟ್ಟ.

ಸಣ್ಣ ಉಪೇಕ್ಷೆ ಕೂಡಾ ಕೆಲವೊಮ್ಮೆ ಬದುಕಿನ ದೊಡ್ಡ ದುರಂತಗಳಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಆದರೆ, ಅದು ಆ ಕ್ಷಣಕ್ಕೆ ಅರಿವಿಗೆ ಬರುವುದಿಲ್ಲ ಅಷ್ಟೇ. 

ಅಶುತೋಷ್ ಮತ್ತೆ ತಿರುಗಿ ಮನೆಗೆ ಬಂದಾಗ ನಿತ್ಯದಂತೆ ಸ್ವಾಗತಿಸಲು, ಸಂತೈಸಲು ಅವಳು ಬರಲಿಲ್ಲ. ಅವನ ಮನಸ್ಸಿನಲ್ಲಿ ಕಸಿವಿಸಿ ಮೂಡುತ್ತಿತ್ತು. ಅಷ್ಟು ದೊಡ್ಡ ಮನೆಯಲ್ಲಿ ತಾನು ಒಂಟಿ ಎಂಬ ಭಾವನೆ ಬಹಳಷ್ಟು ವರ್ಷಗಳ ನಂತರ ಮೂಡಿತು. 

ಆಮೆ ತನ್ನ ಚಿಪ್ಪಿನಲ್ಲಿ ಹುದುಗುವಂತೆ ತನ್ನ ಕೆಲಸ, ಗಾಂಭೀರ್ಯ, ಸಿಟ್ಟಿನಿಂದ ತನ್ನನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿದ್ದರ ಫಲ ಎದ್ದು ಕಾಣುತ್ತಿತ್ತು. ಅಪರ್ಣಾ ತನ್ನ ಜೊತೆಯಿರುವಾಗ ಎಲ್ಲರೂ, ಎಲ್ಲವೂ ಸಹಜವಾಗಿಯೇ ಕಾಣುತ್ತಿತ್ತು ಆದರೆ ಈಗ ಅವಳ ಅನುಪಸ್ಥಿತಿಯಲ್ಲಿ ಎಲ್ಲವೂ ಶೂನ್ಯವಾಗಿಯೇ ಕಾಣುತ್ತಲಿದೆ. ಸುಮ್ಮನೆ ತನ್ನಷ್ಟಕ್ಕೆ ನಡೆದು ರೂಮಿನ ಒಳ ಸೇರಿ ಬಿಟ್ಟ ಅಶುತೋಷ್. ಮತ್ತೆ, ಕೆಲಕ್ಷಣದಲ್ಲಿಯೇ ಅವನ ಎದೆ ನಡುಗಿಸುವ ಸತ್ಯ ಅವನಿಗೆ ತಿಳಿಯಲಿತ್ತು. 

ಯಾರ ಮೇಲೆ ಎಷ್ಟೇ ಕೋಪವಿದ್ದರೂ, ತಾನೆಷ್ಟೇ ಕೂಗಾಟ, ಹಾರಾಟ ನಡೆಸಿದ್ದರೂ ಮತ್ತೆ ಅವರ ಕ್ಷಮೆ ಕೇಳಲು ಅವರ ಮುಂದೆ ತನ್ನೆಲ್ಲಾ ದೊಡ್ಡಸ್ತಿಕೆಯನ್ನೂ ಮೂಟೆಕಟ್ಟಿ ಪಕ್ಕಕ್ಕಿಟ್ಟು ಸಣ್ಣ ಮಗುವಿನಂತಾಗಿ ಬಿಡುತ್ತಿದ್ದ. ಅವನ ಈ ಗುಣವೇ ಅಪರ್ಣಾಳಿಗೆ ಅಚ್ಚುಮೆಚ್ಚು. ಆದರೆ, ಅವಳ ವಿಚಾರದಲ್ಲಿ ಮಾತ್ರ ಅಶುತೋಷ್ ಕಲ್ಲಿನಂತಾಗಿದ್ದ. 

ಸಣ್ಣ-ಪುಟ್ಟ ಖುಷಿಯ ವಿಚಾರಗಳನ್ನು ಹಂಚಿಕೊಂಡಾಗ ಖುಷಿಪಡುವವರಿರಬೇಕು. ಸೋಲಿನಿಂದ ಮೇಲೆತ್ತಲು, ಆತ್ಮಸ್ಥೈರ್ಯ ತುಂಬಲು ನಮ್ಮವರೆನಿಸಿಕೊಂಡವರಿರಬೇಕು. ಸಣ್ಣ ಗೆಲುವನ್ನೂ ಸಂಭ್ರಮಿಸಲು ಹೇಳಿಕೊಟ್ಟ ನಿನಗೇ ಮೊದಲು ನಾನು ಈ ನನ್ನ ದೊಡ್ಡ ಗೆಲುವಿನ ವಿಚಾರವನ್ನು ತಿಳಿಸಬೇಕು, ಅದಕ್ಕೂ ಮೊದಲು ನಾನು ನಿನ್ನ ಕ್ಷಮೆ ಕೇಳಬೇಕು, ಇದೊಂದು ವಾರ ಸುಮ್ಮನಿರಲು ಹೇಳಬೇಕು ಎಂದು ಮನಸ್ಸಿನಲ್ಲಿಯೇ ತಿಳಿಸಬೇಕು ಎಂದು ಅಪರ್ಣಾಳನ್ನು ಹುಡುಕಿ ಮತ್ತೆ ರೂಮಿನಿಂದ ಹೊರ ನಡೆದ.

ಅವಳ ಮೆಚ್ಚಿನ ಸ್ಥಳ, ಮನೆಯ ಪುಟ್ಟ ಲೈಬ್ರರಿಯಲ್ಲಿ ಅವಳು ಕಾಣಲಿಲ್ಲ, ಬಾಲ್ಕನಿಯ ಪುಟ್ಟ ತೂಗುಮಂಚದಲ್ಲಿಯೂ ಅವಳ ಅನುಪಸ್ಥಿತಿ. ಅಪ್ಪ-ಅಮ್ಮನ ಕೋಣೆಯಲ್ಲಿರಬಹುದು ಎಂದುಕೊಂಡು ನಡೆದರೆ ಅಲ್ಲಿಯೂ ಶೂನ್ಯ. ಅವಳಿಗೆ ನನ್ನ ಮೇಲೆ ಅದೆಷ್ಟೇ ಕೋಪವಿದ್ದರೂ ನನ್ನ ಊಟ-ತಿಂಡಿಯ ವ್ಯವಸ್ಥೆಯನ್ನು ತಪ್ಪಿಸಲಾರಳು, ಅಡುಗೆ ಕೋಣೆಯಲ್ಲಿ ಇರಬಹುದು ಎಂದುಕೊಂಡರೆ ಅಲ್ಲಿಯೂ ಅವಳಿಲ್ಲ, ಅಥರ್ವನ ರೂಮ್ ಅನ್ನು ಹೇಗೆ ಮರೆತೆ? ಎಂದುಕೊಂಡು ಅವನ ರೂಮ್ ತೆರೆದರೆ ಅಲ್ಲಿಯೂ ಅವಳಿಲ್ಲ, ಅವಳು ಮಾತ್ರವಲ್ಲ ಅಥರ್ವ ಕೂಡಾ ಇಲ್ಲ. 
ಬೇಸರ ಕಳೆಯಲು ಇಬ್ಬರೂ ಎಲ್ಲಿಗೋ ಹೊರಗೆ ಹೋಗಿರಬಹುದು ಎಂದುಕೊಂಡು ತನ್ನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಸುಮ್ಮನಾದ. 

ಅವನು ಶತಪತ ತಿರುಗುವುದನ್ನು ನೋಡಲೂ ಆಗದೆ, ಸುಮ್ಮನಿರಲೂ ಆಗದೆ, ಏನು ಮಾಡಬೇಕೆಂದು ತಿಳಿಯದೆ ಸುಮ್ಮನಿದ್ದ ಗಿರಿಜಮ್ಮ ಈಗ ಬಾಯ್ಬಿಟ್ಟರು. "ಅಮ್ಮವ್ರು ಮತ್ತೆ ಅಥರ್ವ ಬ್ಯಾಗ್ ತಗೊಂಡು ಎಲ್ಲೋ ಹೋದ್ರು. ಅವರು ನಿಮ್ಮ ಜೊತೆಗೇ ಎಲ್ಲೋ ಹೊರಟಿರಬೇಕು ಅಂತಾ ಸುಮ್ಮನಾದೆ." ಎಂದು ಹೇಳಿ ಸುಮ್ಮನೆ ಒಳ ಹೋದರು ಗಿರಿಜಮ್ಮ.

ಅಶುತೋಷ್ ನಿಗೆ ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಸುಮ್ಮನೆ ಕುಸಿದು ಕುಳಿತ. ಮನಸ್ಸಿನಲ್ಲಿ ಏನೇನೋ ಬೇಡದ ಆಲೋಚನೆಗಳು ಸುಳಿದು ಮರೆಯಾಗುತ್ತಿದ್ದವು. ಹಾಗೆಲ್ಲಾ ಏನೂ ಆಗಿರಲಾರದು ಎಂಬ ಸಣ್ಣ ಭರವಸೆಯ ಕಿಡಿ ಹೊತ್ತಿಸಿಕೊಂಡು ಡೈರಿ ತೆರೆದು ಕುಳಿತ.

ಮನಸ್ಸಿನ ಆಲೋಚನೆಗಳು ಮಾತಾಗುತ್ತಿದ್ದದ್ದು ಡೈರಿಯ ಪುಟಗಳಲ್ಲಿ. ಅವನ ಬದುಕಿನ ಮಹಾರಹಸ್ಯಗಳು, ಅಳು-ನಗು, ಸೋಲು-ಗೆಲುವು, ಕಷ್ಟ-ಸುಖ ಎಲ್ಲದಕ್ಕೂ ಸಾಕ್ಷಿಯಾಗಿದ್ದು, ಅವನ ಮೆಚ್ಚಿನ ಗೆಳೆಯ ಅವನ ಡೈರಿ. 

"ಮಹಾ ಕೋಪದ ಉರಿಯನ್ನು
ತಡೆದುಕೊಂಡವಳಿಗೆ 
ಶೀತಲತೆ ಕಷ್ಟವಾಯಿತೇ..?
ಬಂದುಬಿಡೆ ಸಿರಿಗೌರಿ
ನನ್ನ ಬದುಕಿನ 
ಪ್ರತಿ ಉಸಿರಿನ ಸ್ವರವಾಗಿ
ಸಿರಿಗೌರಿಯಿಲ್ಲದ ಶಿವ
ಆತ್ಮವಿಲ್ಲದ ಪ್ರಾಣದಂತೆ"

ಏನಾದರೂ ಕಳೆದು ಹೋದರೆ ಅದರ ಹಿಂದೆ ಒಂದು ಮಹತ್ತರ ಕಾರಣ ಇರುವುದಂತೆ ಅಥವಾ ಅದಕ್ಕಿಂತ ಬೆಲೆ ಬಾಳುವುದು ನಮಗಾಗಿ ಕಾಯುತ್ತಿರುವುದಂತೆ. ನನ್ನನ್ನು ಹುರಿದುಂಬಿಸಲು ನೀನು ನನಗೆ ಆಗಾಗ ಹೇಳುತ್ತಿದ್ದ ಮಾತು ಇದು. ಆದರೆ, ನಾವಾಗಿಯೇ ಕಳೆದುಕೊಂಡರೆ.. ? ಕೈಯಲ್ಲಿ ರತ್ನವಿದ್ದಾಗ ಅದರ ಬೆಲೆ ತಿಳಿಯದೆ ಹಲವರು ನಂತರ ಅದನ್ನು ಕಳೆದುಕೊಂಡ ಮೇಲೆ ಹುಡುಕುತ್ತಾರೆ. ನನಗೆ ನಿನ್ನ ಬೆಲೆ ತಿಳಿದಿತ್ತು, ಉಳಿಸಿಕೊಳ್ಳಲಾಗದ ಅನಿವಾರ್ಯತೆ ನನ್ನನ್ನು ಕಾಡುತ್ತಿತ್ತು. ನನ್ನ ಮನದ ಮಾತುಗಳನ್ನು ಹೇಳದೆಯೇ ಅರ್ಥೈಸಿಕೊಳ್ಳುತ್ತಿದ್ದೆ, ನನ್ನ ಆಲೋಚನಾ ಲಹರಿಯಲ್ಲಿಯೇ ನಿನ್ನ ಆಲೋಚನಾ ಲಹರಿ ಸಾಗುತ್ತಲಿತ್ತು, ನನ್ನ ಬಲಗೈ, ಬಲ ಮೆದುಳು, ನನ್ನ ಬದುಕಿನರ್ಧವೇ ನೀನಾಗಿದ್ದೆ. ಇದೊಂದು ವಿಚಾರದಲ್ಲಿ ಯಾಕೆ ನನ್ನ ಮನದ ಮಾತನ್ನು ಕೇಳಿಸಿಕೊಳ್ಳದೆ ಹೋದೆ ? 

ಒಮ್ಮೆ ಅನುಭವಿಸಿದ ನೋವನ್ನು ನಾನು ಮತ್ತೊಮ್ಮೆ ಅನುಭವಿಸಲು ಸಿದ್ಧನಿಲ್ಲ, ಯಾಕೆಂದರೆ, ಆಗ ನೋವಿನಿಂದ ಹೊರಬರಲು ನನ್ನೊಡನೆ ನೀನಿದ್ದೆ. ಆದರೆ ಈಗ..?

ನನ್ನ ಗತದ ಅರಿವಿದ್ದೂ ನೀನು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದೆ. ಆದರೆ, ನೀನು ನನ್ನನ್ನು ಅರ್ಥವೇ ಮಾಡಿಕೊಳ್ಳಲಿಲ್ಲವೇ..?

ಅಶುತೋಷ್ ನ ಬರಹ ಹೀಗೇ ಮುಂದುವರಿಯುತ್ತಿತ್ತು. ಅವನ ಬರಹಕ್ಕೆ, ಭಾವದ ಅಣೆಕಟ್ಟಿಗೆ, ಆಲೋಚನಾ ಲಹರಿಗೆ ತಡೆಯೊಡ್ಡಿದ್ದು ಆ ಫೋನ್ ಕಾಲ್.

(ಸಶೇಷ)

(ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಮುಂದಿನ ಬರಹಕ್ಕೆ ನಿಮ್ಮ ಪತಿಕ್ರಿಯೆಗಳೇ ಸ್ಫೂರ್ತಿ)

~ವಿಭಾ ವಿಶ್ವನಾಥ್